Pages

Subscribe:

Ads 468x60px

Saturday, December 19, 2009

ಜೀವ ರೂಪಿಸುತ್ತಿದ್ದ ನದಿಗಳ ಒಡಲಲ್ಲಿಂದು ವಿಷ ತುಂಬಿದವರ್ಯಾರು?

ಸುಮ್ಮನೆ ಒಂದು ತೀರ್ಥಕ್ಷೇತ್ರದಲ್ಲಿ ನದಿ ದಂಡೆಯಲ್ಲಿ ನಿಂತುಕೊಂಡು ಒಬ್ಬ ಭಕ್ತನಾಗಿ ಅಲ್ಲ, ಒಬ್ಬ ವ್ಯಕ್ತಿ ಮಾತ್ರ ಆಗಿ ಆ ನದಿಯನ್ನು ನೋಡಿ. ಅಲ್ಲಿ ಹತ್ತಾರು ಜನ ಸ್ನಾನ ಮಾಡ್ತಾ ಇರ್ತಾರೆ, ಇನ್ನು ಕೆಲವರು ಆ ನೀರನ್ನು ತಲೆ ಮೇಲೆ ಪ್ರೋಕ್ಷಣೆ ಮಾಡಿಕೊಳ್ತಾ ಇರ್ತಾರೆ. ಅದೇ ನದೀಪಾತ್ರದಲ್ಲಿ ಮುಂದೆ ಹೋದರೆ ಮುಂದಿನ ಹಳ್ಳಿಯವರು ಆ ನೀರನ್ನು ಮನೆಗೆ ಹೊತ್ತುಕೊಂಡು ಹೋಗ್ತಾ ಇರ್ತಾರೆ, ಇನ್ನೂ ಮುಂದೆ ಹೋದರೆ ಒಂದು ಫ್ಯಾಕ್ಟರಿಯಿಂದ ಶುದ್ಧೀಕರಿಸದ ಕೊಳಚೆ ನೀರು ಆ ನದಿಗೆ ಸೇರುತ್ತಿರುತ್ತದೆ. ಹರೀತಾ ಇರೋ ನೀರಿಗೆ ಮೈಲಿಗೆ ಇಲ್ವಂತೆ. ಹಾಗಂತ ನಮ್ಮ ಜನ ಶತಮಾನಗಳಿಂದ ನಂಬಿಕೊಂಡು ಬಂದಿದ್ದಾರೆ ಮತ್ತು ಅದನ್ನೇ ತಪ್ಪದೆ ಪಾಲಿಸಿಕೊಂಡು ಬರ್ತಾ ಇದ್ದಾರೆ.
ಬೇರೆ ದೇಶದಿಂದ ಬಂದ ಯಾತ್ರಿಗಳಿಗೆ ಇಲ್ಲಿ ಕುಡಿಯೋಕೆ ಬಾಟಲ್ ನೀರೇ ಬೇಕು. ಹೋಗಲಿ ಅವರು ವಿದೇಶೀಯರು. ಆದರೆ ನಮ್ಮ ’ಫಾರಿನ್ ರಿಟರ್ನ್ಡ್’ ಭಾರತೀಯರು ವಿದೇಶೀಯರಿಗಿಂತ ಒಂದು ಹೆಜ್ಜೆ ಮುಂದೆ, ಅಲ್ಲಿಂದ ಬರುವಾಗಲೇ ಇರುವಷ್ಟು ದಿನಕ್ಕಾಗುವಷ್ಟು ನೀರನ್ನು ಬಾಟಲ್ ಗಳಲ್ಲಿ ಹೊತ್ತು ತರ್ತಾರೆ. ಇಲ್ಲೇ ಹುಟ್ಟಿ, ಇಲ್ಲೇ ಬೆಳೆಯುವವರೆಗೆ ಈ ನೀರು ವರ್ಜ್ಯ ಅನ್ನಿಸಿರಲಿಲ್ಲ, ಅಲ್ಲಿ ಹೋಗಿ ಎರಡು ವರ್ಷ ಇದ್ದ ಕೂಡಲೆ ಭಾರತ ಕೊಳಕರ ದೇಶ ಆಯಿತಾ ಅನ್ನಿಸ್ತಾ ಇತ್ತು. ಆದರೆ ಈಗ ಅವರೆಲ್ಲ ಮಾಡ್ತಾ ಇದ್ದಿದ್ರಲ್ಲಿ ತಪ್ಪೆನು ಇಲ್ಲ ಅನ್ನಿಸ್ತಾ ಇದೆ. ಅವರು ಅವರವರ ಆರೋಗ್ಯ ನೋಡಿಕೊಳ್ತಾ ಇದ್ದಾರೆ ಅಷ್ಟೆ.
ನಮ್ಮ ದೇಶದಲ್ಲಿ ಇರುವಷ್ಟು ನದಿಗಳು ಬೇರೆಲ್ಲೂ ಇಲ್ಲ, ನಾಗರಿಕತೆಗಳು ಹುಟ್ಟಿದ್ದೆಲ್ಲ ನದಿತೀರಗಳಲ್ಲೆ-- ಅಂತೆಲ್ಲ ಈಗಲೂ ಮಕ್ಕಳು ತಮ್ಮ ಪಠ್ಯಪುಸ್ತಕಗಳಲ್ಲಿ ಓದ್ತಾ ಇದ್ದಾರೆ. ಆದರೆ ಅವರಿಗೆ ಯಾರೂ ಹೇಳದೆ ಇರೋ ಸತ್ಯಗಳು ತುಂಬಾ ಇವೆ. ಈಗ ಮಕ್ಕಳಿಗೆ ಹೇಳಬೇಕಾಗಿರೋದು ಬದುಕು ಕೊಡೋ ನದಿಗಳ ಬಗ್ಗೆ ಅಲ್ಲ, ಸಾಯ್ತಾ ಇರೋ, ಈಗಾಗಲೇ ಸತ್ತಿರೋ ನದಿಗಳ ಬಗ್ಗೆ; ಆ ನದಿಗಳನ್ನು ನಂಬಿಕೊಂಡು ಬದುಕಿದ ಜನರನ್ನು ಸಾಯಿಸುತ್ತಾ ಇರೋ ನದಿಗಳ ಬಗ್ಗೆ.
ಯಮುನಾ ನದಿಗೆ ದೆಹಲಿಯೊಂದರಲ್ಲೇ ಪ್ರತಿ ದಿನ ೩.೬ ಬಿಲಿಯನ್ ಟನ್ ಕೊಳಚೆ ಸೇರುತ್ತಾ ಇದೆ. ಯಮುನೆಯ ಕಥೆಯೇ ಹೀಗಾದರೆ ಇನ್ನು ನಮ್ಮ ಪೂಜ್ಯ ಗಂಗೆಯ ಮಡಿಲಲ್ಲಿ ಬಂದು ಬೀಳುವ ತ್ಯಾಜ್ಯಗಳ ಕಥೆ ಹೇಳದಿರುವುದೇ ಒಳ್ಳೆಯದು. ಎಲ್ಲೋ ಹೋಗುವುದೇ ಬೇಡ. ನಮ್ಮ ಬೆಂಗಳೂರಿನ ಅರ್ಕಾವತಿ ನದಿ ಎಲ್ಲಿದೆ? ನಮ್ಮ ಉತ್ತರ ಕರ್ನಾಟಕದ ಕಾಳಿ ನದಿಯ ಸುತ್ತಮುತ್ತಲಿನ ರೈತರ ಹೋರಾಟದ ಕಥೆ ಇನ್ನೂ ದುರಂತಮಯ. ನದಿ ನೀರನ್ನೇ ನಂಬಿಕೊಂಡು ವ್ಯವಸಾಯ ಮಾಡಲು ಇಲ್ಲಿ ಸಾಧ್ಯವೇ ಇಲ್ಲ. ಯಾಕೆಂದರೆ ನೀರು ಗದ್ದೆಗೆ ಬಿಡದಿದ್ದರೆ ಪೈರು ನಾಶವಾಗುತ್ತದೆ, ಈ ನದಿಯ ನೀರು ಬಿಟ್ಟರೂ ಪೈರು ಸಾಯುತ್ತದೆ. ಅಲ್ಲಿನ ನೂರಾರು ಎಕರೆ ಫಲವತ್ತಾದ ಜಮೀನು ಈಗ ಬರಡು ಭೂಮಿ. ಈಗ ಕಾಳಿ ನದಿಯ ನೀರನ್ನು ಹತ್ತಿರದ ದಾಂಡೇಲಿಯಲ್ಲೂ ಯಾರೂ ಕುಡಿಯುವುದಿಲ್ಲ, ಅಲ್ಲಿಗೆ ಕುಡಿಯುವ ನೀರು ಬೇರೆ ಕಡೆಯಿಂದ ತರಿಸಲಾಗುತ್ತದೆ. ಅಲ್ಲಿ ಸುತ್ತಮುತ್ತ ಎಲ್ಲೂ ಮೀನುಗಾರಿಕೆ, ಹೈನುಗಾರಿಕೆ ಯಾವುದೂ ಸಾಧ್ಯವಿಲ್ಲ. ಬೇರೆಡೆಯಿಂದ ಸಾವಿರಾರು ರೂಪಾಯಿ ಕೊಟ್ಟು ತಂದ ಆಕಳು ವಿಚಿತ್ರ ರೋಗಗಳಿಗೆ ಈಡಾಗಿ ಸಾಯುತ್ತವೆ, ಹುಟ್ಟಲಿರುವ ಮಗು, ಅದರ ತಾಯಿ, ದನ-ಕರುಗಳು, ಪೈರು, ಕಾಳಿ ನದಿಯ ನೀರಿನ ಸಂಪರ್ಕಕ್ಕೆ ಬಂದ ಎಲ್ಲಾ ಜೀವಿಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಈ ಕಥೆ ಎಲ್ಲೋ ಕೇಳಿದ ಹಾಗೆ ಇದೆಯಾ? ಹೌದು. ಭೋಪಾಲ್ ಅನಿಲ ದುರಂತಕ್ಕೆ ಸಿಲುಕಿಕೊಂಡ ಜನ ಇದೆಲ್ಲ ಕಷ್ಟಗಳನ್ನೆಲ್ಲ ಇನ್ನೂ ಅನುಭವಿಸುತ್ತಿದ್ದಾರೆ.
ಈ ಎಲ್ಲಾ ತೊಂದರೆಗಳಿಗೂ ಮೂಲ ಕಾರಣ ಕಾಳಿ ನದಿ ದಂಡೆಯಲ್ಲಿರುವ West Coast Paper Mills ಮತ್ತು caustic soda ಕಾರ್ಖಾನೆಗಳು, ಅವು ರಾಜಾರೋಷವಾಗಿ ಶುದ್ಧೀಕರಿಸದೆ ನದಿಗೆ ಬಿಡುತ್ತಿರುವ ರಾಸಾಯನಿಕಗಳು. ಮೂಲಗಳ ಪ್ರಕಾರ, Paper Mills ಪ್ರತಿ ದಿನ 64,800 kilolitres ರಾಸಾಯನಿಕಗಳನ್ನು ಕಾಳಿ ನದಿಗೆ ಬಿಡುತ್ತಿದೆ. ಇವಕ್ಕೆಲ್ಲ ಕಲಶ ಇಟ್ಟ ಹಾಗೆ ಪ್ರಪಂಚದಲ್ಲೆ ಏಕೈಕ ಅತ್ಯಂತ ದಟ್ಟ ಕಾಡಿನ ಮಧ್ಯೆ ಸ್ಥಾಪಿಸಲ್ಪಟ್ಟಿರುವ ಕೈಗಾ ಅಣು ವಿದ್ಯುತ್ ಸ್ಥಾವರ. ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನೂ ತಳ್ಳಿ ಹಾಕಿ ಆ ಸ್ಥಾವರ ನಿರ್ಮಿಸಲಾಗಿದೆ; ಕಾರಣ, ಈಗಾಗಲೇ ಅದಕ್ಕೋಸ್ಕರ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗಿದೆ. ಅಣು ಸ್ಥಾವರಗಳ ೩ ಕಿ.ಮೀ. ಸುತ್ತಳತೆಯಲ್ಲಿ ಯಾವುದೇ ಜನ ವಸತಿ ಇರಬಾರದು. ಆದರೆ, ೧.೫ ಕಿ.ಮೀಯಿಂದಲೇ ಜನ ವಸತಿ ಶುರುವಾಗುತ್ತದೆ. ಇದನ್ನೆಲ್ಲ ಕೇಳುವವರು ಯಾರು?
"ಪ್ರವಾಹದ ವಿರುದ್ಧ ಈಜಿದವರಿಗೆ, ಸತ್ಯಕ್ಕಾಗಿ ಹೋರಾಡಿದವರಿಗೆ, ಸಿಗೋದು ಇವು ನಾಲ್ಕು ಮಾತ್ರ: ವ್ಯಂಗ್ಯ, ನಿರ್ಲಕ್ಶ್ಯ, ಏಕಾಂಗಿತನ ಮತ್ತು ಅವಮಾನ," ಇದು ೪೦ ವರ್ಷಕ್ಕೂ ಮೇಲ್ಪಟ್ಟು ನಮ್ಮ ದೇಶದ ಪರಿಸರವನ್ನು ಉಳಿಸಿಕೊಳ್ಳಲು ಹೋರಾಟ ಮಾಡಿರುವ, ಇನ್ನೂ ಇಳಿ ವಯಸ್ಸಿನಲ್ಲೂ ಹೋರಾಡುತ್ತಲೇ ಇರುವ ಚಿಪ್ಕೋ ಚಳುವಳಿ ಹರಿಕಾರ ಸುಂದರ್ ಲಾಲ್ ಬಹುಗುಣ ಹೇಳಿದ ಮಾತು. ಕಾಳಿ ಬಚಾವೋ ಆಂದೋಲನದ ರೂವಾರಿ ಕೂಡ ಅವರೇ. ಕಾಳಿ ನದಿಯನ್ನು ಉಳಿಸಿಕೊಳ್ಳಲು ಸಾಧ್ಯವಿದ್ದರೆ ಅದು ಜನರಿಂದ ಮಾತ್ರ ಸಾಧ್ಯ ಅನ್ನುತ್ತಾರೆ ಬಹುಗುಣ. ಗಂಗಾ ನದಿಗೆ ಕಟ್ಟಿದ ತೆಹ್ರಿ ಅಣೆಕಟ್ಟು ಹಿಮಾಲಯದ ಪರಿಸರಕ್ಕೆ, ಅಲ್ಲಿನ ವನ್ಯಜೀವಿಗಳಿಗೆ ಮತ್ತು ತಪ್ಪಲಲ್ಲಿರುವ ಹಳ್ಳಿಗಳಿಗೆ ಅಪಾಯಕಾರಿ ಅನ್ನುವ ಬಹುಗುಣರ ಹೋರಾಟಕ್ಕೆ ಜಯ ಸಿಗಲಿಲ್ಲ. ಆ ಅಣೆಕಟ್ಟಿನಿಂದ ನೀರನ್ನು ದೆಹಲಿಯ ರಾಜಕಾರಣಿಗಳ ಮನೆಗೆ, five star ಹೋಟೆಲ್ ಗಳಿಗೆ ದಿನಕ್ಕೆ ೫೦೦-೧೦೦೦ ಲೀಟರ್ ಕೊಡ್ತಾರೆ, ಆದರೆ ನೀರಿಲ್ಲದೆ ಸಂಕಟ ಪಡುತ್ತಿರೋ ಹಿಮಾಲಯ ತಪ್ಪಲಿನ ಹಳ್ಳಿಗಳಿಗೆ ೫ ಲೀಟರ್ ಕೂಡ ಸಿಗ್ತಾ ಇಲ್ಲ. ಇಂಥ ಸ್ಥಿತಿ ಕಾಳಿ ತೀರದ ರೈತರಿಗೆ ಬರದೆ ಇರಲಿ.
ಸುಂದರ್ ಲಾಲ್ ಬಹುಗುಣ ಹುಟ್ಟು ಹಾಕಿದ ಕಾಳಿ ಬಚಾವೊ ಆಂದೋಲನವನ್ನು ಉತ್ತರ ಕರ್ನಾಟಕದ ಪರಿಸರ ಸಂರಕ್ಷಣಾ ಕೇಂದ್ರದ ಪರಿಸರವಾದಿಗಳು, ಆದಿವಾಸಿಗಳು ಮತ್ತು ಕೆಲವು ಸಂಘ ಸಂಸ್ಥೆಗಳು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಕಾಳಿ ನದಿಯಾಗಲಿ, ಚಾಮಲಾಪುರ ಉಷ್ಣ ವಿದ್ಯುತ್ ಸ್ಥಾವರವಾಗಲಿ, ಇನ್ಯಾವ ಪರಿಸರ ಸಂಬಂದಿ ವಿಷಯಗಳೇ ಆಗಲಿ, ಅದ್ಯಾಕೆ ಬರೀ ಆ ಪ್ರದೇಶದ ಸುತ್ತಮುತ್ತಲಿನ ಜನ ಮಾತ್ರ ಹೋರಾಟ ಮಾಡುತ್ತಾರೆ?
ಯಾವುದೇ ಸರಕಾರ ಬರಲಿ ಅವರು ಪಠಿಸುವ ಮಂತ್ರ ಒಂದೇ- ಅಭಿವೃದ್ಧಿ, ಅದೂ ಹೇಗೆ? ರಸ್ತೆ, ಅಣೆಕಟ್ಟು ಕಟ್ಟಿದರೆ ಅದು ಅಭಿವೃದ್ಧಿ, ಫಲವತ್ತಾದ ಗದ್ದೆ, ತೋಟಗಳನ್ನು ಕಸಿದುಕೊಂಡು ಅಲ್ಲಿ ಚೆಂದದ ರಸ್ತೆ ಕಟ್ಟಿದರೆ ಸರಕಾರದ ಪ್ರಕಾರ ಅದು ಅಭಿವೃದ್ಧಿ. ಸರಕಾರಗಳು, ಅವುಗಳ ಮಂತ್ರಿಗಳು ಪರಿಸರಕ್ಕೆ ತೀರಾ ಹತ್ತಿರ ಬರುವುದು ಗಿಡ ನೆಡುವ ಕಾರ್ಯಕ್ರಮ ಇದ್ದಾಗ ಮಾತ್ರ. ಪ್ರಕೃತಿಯ, ಪರಿಸರವಾದಿಗಳ, ರೈತರ ಕೂಗು, ಹೋರಾಟ ಬರೀ ಮಾಡಲು ಕೆಲಸ ಇಲ್ಲದವರು ನಮ್ಮ ನೆಮ್ಮದಿಯ ದಿನನಿತ್ಯದ ಆಗುಹೋಗುಗಳಿಗೆ ಮಾಡುವ ತೊಂದರೆ ಅಂತ ಸರಕಾರ ಮಾತ್ರ ತಳ್ಳಿಹಾಕುತ್ತಿಲ್ಲ, ನಾವೂ ಕೂಡ ಅದೇ ರೀತಿ ಮಾತಾಡುತ್ತೇವೆ, ಹಾಗೇ ದಿವ್ಯ ನಿರ್ಲಕ್ಷ್ಯದಿಂದ ನಡೆದುಕೊಳ್ಳುತ್ತಿದ್ದೇವೆ. ಏನೇ ಆಗಲಿ, ಕಾಳಿ ನದಿ ಅಮೇರಿಕಾದ ಇನ್ನೊಂದು ಕೊಲೊರಾಡೊ, ನೀರೇ ಖಾಲಿಯಾಗಿ ಬತ್ತಿ ಹೋದ ಅರಾಲ್ ನದಿ ಆಗುವುದೂ ಬೇಡ. ಕಾಳಿ ನದಿ ತೀರದ ರೈತರ ಬಾಳು ಇನ್ನೊಂದು ಭೋಪಾಲ್ ದುರಂತ ಆಗುವುದೂ ಬೆಡ. ಅದೆಲ್ಲ ನಮ್ಮ ಕೈಯಲ್ಲೆ ಇದೆ.

Saturday, December 5, 2009

ದೇಶ ಕಾಯೋರ ಹಿತ ಕಾಯೋದಕ್ಕೆ ಯಾರಿದ್ದಾರೆ?

ವೀಕೆಂಡ್ ಬಂತೆಂದರೆ ವಾರ ಇಡೀ ಕೆಲಸ ಮಾಡಿದ್ದೀವಿ, ಎರಡು ದಿನ ಪಾರ್ಟಿ, ಶಾಪಿಂಗ್ ಅಂತ ರಿಲಾಕ್ಸ್ ಆಗೋಣ ಅಂದುಕೊಳ್ತೀವಿ. ಹೋಗಲಿ ನಾವು ಕಷ್ಟ ಪಟ್ಟು ಕೆಲಸ ಮಾಡಿದ್ದಾದ್ರೂ ಎಷ್ಟು ದಿನ? ಐದು ಅಥವಾ ಆರು. ಇನ್ನು ಎರಡು ವಾರ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿಬಿಟ್ಟರಂತೂ ಕೇಳೋದೇ ಬೇಡ, ಪ್ರಪಂಚದ ಭಾರ ಎಲ್ಲಾ ನಮ್ಮ ತಲೆ ಮೇಲೆ ಹೊತ್ತುಕೊಂಡ ಹಾಗೆ ಆಡ್ತೀವಿ. ಆದರೆ ಅಡುಗೆ ಮಾಡೋರಿಗೆ, ದನ ಕಾಯೋರಿಗೆ ರಜೆ ಇಲ್ವಂತೆ, ಹಾಗೇನೇ ದೇಶ ಕಾಯೋರಿಗೆ. ನಾವು ಯೋಚನೆ ಮಾಡದೇ ಇರೋ, taken for granted ಯೋಧರು, ತಿಂಗಳುಗಟ್ಟಲೆ ಮನೆ ಮುಖ ನೋಡದೆ, ಯಾವಾಗ ಮೈಮರೆತರೆ ಶತ್ರುಗಳು ಕಣ್ಣು ತಪ್ಪಿಸಿ ಒಳನುಗ್ಗುತ್ತಾರೋ ಅಂತ ಕಣ್ಣು ಮುಚ್ಚದೆ ನಮ್ಮನ್ನು ಕಾಯೋ ಸೈನಿಕರು, ಅವರನ್ನು ನಾವು ನೆನಸಿಕೊಳ್ಳೋದು ನಮಗೆ ಕಷ್ಟ ಬಂದಾಗ ಮಾತ್ರ.
ದೇಶದ ಯಾವ ಯಾವುದೋ ಮೂಲೆಗಳಿಂದ, ಜಾಸ್ತಿ ಹಳ್ಳಿಗಳಿಂದ ಯಾವುದೋ ಅವಶ್ಯಕತೆಗಳಿಗೆ, ಆದರ್ಶಗಳಿಗೆ, ಅನಿವಾರ್ಯತೆಗಳಿಗೆ ತಲೆಬಾಗಿ ಸೇನೆಗೆ ಸೇರುತ್ತಾರೆ ಯುವಕರು. ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತಿದೆ ಗಡಿಗಳಲ್ಲಿ ಎಷ್ಟು ಯೋಧರು ದಿನಾ ಪ್ರಾಣ ಬಿಡ್ತಾ ಇದಾರೆ ಅಂತ? ನಾವೆಷ್ಟು ಜನ ಆ ಸುದ್ದಿಗಳು ಬಂದಾಗ ಟಿವಿ ಚಾನಲ್ ಬದಲಾಯಿಸದೆ ಇರ್ತೀವಿ? ದಿನಾ ಸಾಯೋರಿಗೆ ಅಳೋರ್ಯಾರು ಅಂತ ಜನ ಸಾಮಾನ್ಯರಿಂದ ಹಿಡಿದು ಸರಕಾರದ ತನಕ ಎಲ್ಲರೂ ತೋರುವ ದಿವ್ಯ ನಿರ್ಲಕ್ಶ್ಯಕ್ಕೆ ಒಳಗಾಗಿರುವವರು ಬಹುಶ ನಮ್ಮ ಸೈನಿಕರು ಮಾತ್ರ ಅನ್ನಿಸುತ್ತಿದೆ. ಸಚಿನ್ ತೆಂಡುಲ್ಕರ್ ೨೦ ವರ್ಷ ಕ್ರಿಕೆಟ್ ಜೀವನ ಪೂರೈಸಿದ್ದಕ್ಕೆ ಅವನಿಗೆ ಪ್ರಶಂಸೆಗಳ ಸುರಿಮಳೆ ಆಯಿತು, ಐಶ್ವರ್ಯ ರೈ ಹುಟ್ಟಿದ ಹಬ್ಬದ ಬಗ್ಗೆ, ಮುಂಬೈ ದಾಳಿಯಲ್ಲಿ ಸೆರೆ ಸಿಕ್ಕ ಉಗ್ರಗಾಮಿ ಅಜ್ಮಲ್ ಕಸಬ್ ಜೈಲ್ ಒಳಗೆ ಮಟನ್ ಬಿರಿಯಾನಿ ಬೇಕು ಅಂತ ಕೇಳಿದಾಗ ಅದರ ಬಗ್ಗೆ, ಬಿರಿಯಾನಿ ಕೊಡದೆ ಇದ್ರೆ ಆಗುವ ’ಮಾನವ ಹಕ್ಕುಗಳ ಉಲ್ಲಂಘನೆ’ ಬಗ್ಗೆ ಚರ್ಚೆಗಳು ಎಲ್ಲಾ ಮಾಧ್ಯಮಗಳಲ್ಲಿ ನಡೆದವು. ಆದರೆ ನಮ್ಮ ಸೈನಿಕರು ಕಳೆದ ೬೦ ವರ್ಷಗಳಿಂದ ಪ್ರತಿಕ್ಷಣ ಹೋರಾಡ್ತಾ ಇದ್ದಾರೆ, ಬರೀ ಗಡಿಗಳಲ್ಲಿ ಮಾತ್ರ ಅಲ್ಲ, ದೇಶದ ಒಳಗೆ ನುಗ್ಗುವ ಉಗ್ರಗಾಮಿಗಳ ವಿರುದ್ಧ ಕೂಡ. ಅವರ ಬಗ್ಗೆ, ಅವರು ಮಾಡ್ತಾ ಇರೋ ಕೆಲಸಗಳ ಬಗ್ಗೆ ಯಾಕೆ ಮಾಧ್ಯಮಗಳಲ್ಲಿ ಚರ್ಚೆ ನಡೆಯಲ್ಲ? ಯುದ್ಧ ಗೆದ್ದು ಬಂದಾಗ ಯಾವ ಪಕ್ಷ ಅಧಿಕಾರದಲ್ಲಿರುತ್ತೋ ಅದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತೆ, ಬದುಕಿ ಉಳಿದ ಸೈನಿಕರನ್ನು ಯಾರೂ ಸನ್ಮಾನ ಮಾಡಲು ಹೋಗುವುದಿಲ್ಲ, ಸತ್ತ ಸೈನಿಕರನ್ನು ಮೆರವಣಿಗೆ ಮಾಡಿ ತಮ್ಮ ದೇಶಪ್ರೇಮ ತೋರಿಸಿಕೊಳ್ಳುತ್ತಾರೆ.
ಹೀಗೆಲ್ಲ ಅನ್ನಿಸಿದ್ದು ಸತತವಾಗಿ ಬರುತ್ತಿರುವ ವರದಿಗಳನ್ನು ಓದಿ. ಸೈನ್ಯಕ್ಕೆ ಯುವಕರು ಸೇರೋದು ತುಂಬಾ ಕಡಿಮೆಯಾಗಿದೆ. ಅದರಲ್ಲೂ ಸೇನಾಧಿಕಾರಿಗಳ ಕೊರತೆ ೧೧,೦೦೦ ದಾಟಿದೆ. ಹೋದ ವರ್ಷ ೧೫೦೦ ಜನ ಅಧಿಕಾರಿಗಳ ಸ್ಥಾನಕ್ಕೆ ಭರ್ತಿಯಾದರೆ, ೧೮೦೦ ಅಧಿಕಾರಿಗಳು ಸೇನೆ ಬಿಟ್ಟು ಹೋಗಿದ್ದಾರೆ. ಯಾರಿಗಾದ್ರೂ ಅಷ್ಟೇ. ನಮ್ಮನ್ನು ತುಂಬಾ ನಿರ್ಲಕ್ಶ್ಯ ಮಾಡ್ತಾ ಇದ್ದಾರೆ ಅನ್ನಿಸಿದಾಗ, ನಮ್ಮ ಅವಶ್ಯಕತೆಗಳಿಗೆ ಬೆಲೆ ಕೊಡ್ತಾ ಇಲ್ಲ ಅನ್ನಿಸಿದಾಗ ಆ ಕೆಲಸ ಮಾಡೋದಕ್ಕೆ ಇರೋ ಉತ್ಸಾಹ ಕಡಿಮೆ ಆಗುತ್ತೆ ಅಲ್ವಾ? ನಮ್ಮ ಸೇನೆಯ ವಿಷಯದಲ್ಲಿ ಆಗ್ತಾ ಇರೋದು ಅದೇ. ಸೇನೆಯಿಂದ ನಿವೃತ್ತಿ ತೆಗೆದುಕೊಂಡು ಬೇರೆ ಕೆಲಸಕ್ಕೆ ಸೇರುತ್ತಾ ಇರುವವರ ಸಂಖ್ಯೆ ಕೂಡ ಜಾಸ್ತಿ ಆಗ್ತಾ ಇದೆ. ಅದರಲ್ಲಿ ಅವರದೇನೂ ತಪ್ಪಿಲ್ಲ. ಈಗ ಇಂಗ್ಲಿಷ್ ಗೊತ್ತಿದ್ರೆ ಸಾವಿರಾರು ರೂಪಾಯಿ ಸಂಪಾದನೆ ಮಾಡಬಹುದು. ಹೇಗಾದ್ರೂ ಬದುಕಬಹುದು. ಆದ್ರೆ ಸೇನೆಯಲಿದ್ದವರು ಅಂತ ಹೇಳಿ, ಸೇನೆ ಸೇರೋಕೆ ಮುಂಚೆ ಯಾವ ಡಿಗ್ರೀನಾದ್ರೂ ಓದಿರಿ, ಒಂದು ಸಲ ಸೇನೆಯಿಂದ ಹೊರಗೆ ಬಂದ ಮೇಲೆ ನಿಮಗೆ ಸೆಕ್ಯುರಿಟಿ ಗಾರ್ಡ್ ಕೆಲಸ ಬಿಟ್ಟು ಬೇರೆ ಸಿಗೋದು ಕಷ್ಟ. ಇದು ನೂರಾರು ಸೈನಿಕರ ಅನುಭವ.
ಇರುವ ಸೇನಾಧಿಕಾರಿಗಳ ಕೊರತೆಯನ್ನು ತುಂಬಿಸಲು ಕೇಂದ್ರ ಸರಕಾರ, ಸೇನೆ ಸತತ ಪ್ರಯತ್ನ ಮಾಡ್ತಾ ಇವೆ. ಸೇನೆಗೆ ಸೇರಿ, ನಿಮ್ಮ ದೇಶಪ್ರೇಮ ತೋರಿಸಿ ಅಂತ ನಮ್ಮ ದೇಶದ ನಾಯಕರು ಭಾಷಣಗಳಲ್ಲಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರೆ ಸಾಲದು. ಯುವಕರು ಸೇನೆ ಯಾಕೆ ಸೇರಬೇಕು ಅನ್ನುವುದಕ್ಕೆ ಒಂದು valid reason ಕೊಡಬೇಕು. ಆದರ್ಶಗಳು ಹೊಟ್ಟೆ ತುಂಬಿಸುವುದಿಲ್ಲ ಅಂತ ಈಗಾಗಲೇ ಸೇನೆ ಸೇರಿ, ಅಲ್ಲಿ ಭ್ರಮನಿರಸನಗೊಂಡು ಹೊರಬಂದ ಸೈನಿಕರಿಗೆ ಗೊತ್ತು. ಸರಕಾರ ಅವರಿಗೆ ಕೊಡೋ ಸಂಬಳ, ಆಮೇಲೆ ಕೊಡೋ ನಿವೃತ್ತಿ ಹಣ ಯಾವುದಕ್ಕೂ ಸಾಲದು. ಸರಕಾರ ತುಂಬಾ ವರ್ಷಗಳ ನಂತರ 6th Pay Commission ಶಿಫಾರಸಿನ ಪ್ರಕಾರ ಸೈನಿಕರಿಗೆ ಸಂಬಳ ಜಾಸ್ತಿ ಮಾಡಿದೆ. ಆದರೆ ಆ ಸಂಬಳಕ್ಕು, ಚಳಿಯಲ್ಲಿರುವ ಸೈನಿಕರಿಗೆ ಬಟ್ಟೆ, ಆಹಾರ ಇತ್ಯಾದಿಗಳನ್ನು ಕಳುಹಿಸಲೂ ಸೇನಾಧಿಕಾರಿಗಳು bureaucrats ಹತ್ರ ಕೈಚಾಚಬೇಕು. ಸಂಬಳ ಜಾಸ್ತಿ ಮಾಡಿ ಅಂತ ವರ್ಷ ವರ್ಷ ಪ್ರತಿಭಟನೆ ಮಾಡದೆ ಇರೋ ಸರಕಾರಿ ನೌಕರರು ಅಂದರೆ ಮಿಲಿಟರಿಯವರು ಮಾತ್ರ ಅಲ್ವಾ? ಈಗ ಸೇನೆ ಸೇರುವವರು ಅಂದರೆ ತೀರಾ ಬಡವರು, ಬದುಕಲು ಇನ್ಯಾವ ದಾರಿಯು ಕಾಣದೆ ಇರುವವರು ಅನ್ನುವ ಸ್ಥಿತಿ ಬಂದಿದೆ. ನಮ್ಮ ನಾಯಕರು, ಶ್ರಿಇಮಂತರೆಲ್ಲ ಅವರವರ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ ಓದಿಸುತ್ತಾರೆ, ಸಾಮಾನ್ಯರು ಯಾಕೆ ಸೇನೆಯಲ್ಲಿ ಇದ್ದು ಬಂದವರು ಕೂಡ ನಮ್ಮ ಮಕ್ಕಳು ಅಲ್ಲಿದ್ದು ಅನುಭವಿಸುವುದು ಬೇಡ ಅನ್ನುತ್ತಿದ್ದಾರೆ. ಇನ್ನು ಪ್ರತಿ ಮನೆಯಲ್ಲಿ ಈಗ ಇರುವವರಾದರೂ ಎಷ್ಟು ಜನ? ಇರುವ ಒಬ್ಬರು, ಇಬ್ಬರು ಮಕ್ಕಳನ್ನು ಕಳೆದುಕೊಳ್ಳಲು ಯಾವ ತಂದೆ-ತಾಯಿಯೂ ಸಿದ್ದವಿಲ್ಲ. ೈನ್ನು ಬೇರೆ ದೇಶಗಳಲ್ಲಿ ಇರುವಂತೆ ಪ್ರತಿ 18 ವರ್ಷ ತುಂಬಿದ ಯುವಕ ಅಥವಾ ಯುವತಿ ಸೇನೆ ಸೇರುವುದು ಕಡ್ಡಾಯ ಮಾಡುವುದು ನಮ್ಮ ದೇಶದಲ್ಲಿ ಸಾಧ್ಯವಿಲ್ಲ,ಯಾಕೆಂದರೆ ಅಲ್ಲೂ ದುಡ್ಡಿರುವವರು ತಪ್ಪಿಸಿಕೊಳ್ಳುತ್ತಾರೆ, ಯಥಾಪ್ರಕಾರ ಬಡವರು ಸಿಕ್ಕಿ ಹಾಕಿಕೊಳ್ಳುತ್ತರೆ.
ಸೇನೆ ಸೇರಬೇಕು ಅನ್ನೋ ಇಚ್ಛೆ ಇರುವ ಯುವಕರಿಗೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸೇನಾ ಕೇಂದ್ರಗಳನ್ನು ಆರಂಭಿಸಬೇಕು, ಸೇನೆಯ ನಿಜವಾದ ಸ್ಥಿತಿಯ ಬಗ್ಗೆ ಯುವಕರಿಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಪಠ್ಯಪುಸ್ತಕಗಳಲ್ಲಿ ಸೇನೆಯ ಬಗ್ಗೆ ಮಾಹಿತಿಯನ್ನು ಸೇರಿಸಬೇಕು. ಅಲ್ಲಿಗೆ ಹೋದವರೆಲ್ಲಾ ಸಾಯುತ್ತಾರೆ ಅನ್ನುವ ನಂಬಿಕೆಯ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಎಲ್ಲಕ್ಕಿಂತ ಮೊದಲು ಹುತಾತ್ಮರಾದ ಸೈನಿಕರ ಮನೆಯವರಿಗೆ ಪಿಂಚಣಿ ಹಣ ಸರಿಯಾಗಿ ತಲುಪುತ್ತದೆ, ಅವರಿಗೆ ಅನ್ಯಾಯ ಆಗುವುದಿಲ್ಲ ಅನ್ನುವ ನಂಬಿಕೆ ಇದ್ದರೆ ಯುವಕರು ಜಾಸ್ತಿ ಸೇನೆಗೆ ಸೇರುತ್ತಾರೆ. ನಮ್ಮ ಯುವಕರಲ್ಲಿ ದೇಶಭಕ್ತಿ ಕಮ್ಮಿಯಾಗಿಲ್ಲ, ಅದನ್ನು ಕಾಪಾಡಿಕೊಂಡು ಬರುವುದು ಸರಕಾರದ, ಸಮಾಜದ ಕೈಯಲ್ಲಿದೆ. ಅವರು ಶೌರ್ಯಕ್ಕೆ ಕೊಡೋ ಮೆಡಲುಗಳು, ಹೊಗಳಿಕೆ, ಸತ್ತಮೇಲೆ ರಾಜಕಾರಣಿಗಳು ಸುರಿಸೋ ಮೊಸಳೆ ಕಣ್ಣೀರು, ಮಾಧ್ಯಮಗಳ ಮುಂದೆ ಕೊಡೋ ತಾತ್ಕಾಲಿಕ ಚೆಕ್ಕುಗಳಲ್ಲ ನಮ್ಮ ಸೈನಿಕರಿಗೆ ಬೇಕಾಗಿರೋದು. ಅವರಿಗೆ ಬೇಕಾಗಿರೋದು ಮೂರು ಹೊತ್ತು ಅನ್ನ, ನಿವೃತ್ತಿಯ ನೆಮ್ಮದಿಯ ಬಾಳಿಗೆ ಒಂದು ಅವಕಾಶ. ನಮ್ಮನ್ನು, ದೇಶವನ್ನು ಕಾಯೋರಿಗೆ ಅದೂ ಜಾಸ್ತೀನಾ?