Pages

Subscribe:

Ads 468x60px

Wednesday, September 6, 2017

ಮಾನವ ಹಕ್ಕು ?

ನಮ್ಮ ಆಂಗ್ಲ ಪತ್ರಿಕೆಯೊಂದು ಮೊನ್ನೆ ಮೊನ್ನೆ ಕಾಶ್ಮೀರದಲ್ಲಿ ಸೈನ್ಯದ ಜೀಪಿಗೆ ನಾಗರಿಕನೊಬ್ಬನನ್ನು ಕಟ್ಟಿಕೊಂಡು ಹೋದ ಘಟನೆಯನ್ನು ಹೇಗೆ ಹೇಗೋ ತಿರುಚಿ ಮುರುಚಿ ಜಲಿಯನ್‍ವಾಲಾ ಬಾಗ್‍ ಹತ್ಯಾಕಾಂಡಕ್ಕೆ ಹೋಲಿಸಿತು. ಆ ಭಾರತೀಯ ಸೇನಾಧಿಕಾರಿಯನ್ನು ಜನರಲ್ ಡೈಯರ್‌ಗೆ ಹೋಲಿಸಿ ಸಮಾಧಾನಪಟ್ಟುಕೊಂಡಿತು.
ಕಾಶ್ಮೀರದಲ್ಲಿ ನಡೆದದ್ದು ಹಿಂಸೆಯನ್ನು ತಡೆಯುವ ಪ್ರಯತ್ನ; ಬ್ರಿಟಿಷರದ್ದು ಕುತಂತ್ರದ ಕಗ್ಗೊಲೆ. ನಿಜವಾಗಿಯೂ ಜಲಿಯನ್‍ವಾಲಾ ಬಾಗ್‍ನ್ನು ಹೋಲಿಸಬೇಕಾದ್ದು ಇಂದಿರಾ ತಂದ ತುರ್ತುಪರಿಸ್ಥಿತಿಗೆ. ಇರಲಿ. ಸುಮಾರು 98 ವರ್ಷಗಳ ಹಿಂದೆ ನಡೆದ ಜಲಿಯನ್‍ವಾಲಾ ಬಾಗ್‍ ಹತ್ಯಾಕಾಂಡದ ಬಗ್ಗೆ ಓದಿದಾಗೆಲ್ಲ ನನಗೆ ನೆನಪಾಗೋದು 1989ರ ಚೀನಾದ ಟಿಯಾನನ್ಮೆನ್‍ ಸ್ಕ್ವೇರ್‌ ಮಾರಣಹೋಮ. ಸರಕಾರವೇ ತಾನು ರಕ್ಷಿಸಬೇಕಾದ ಜನಗಳ ಮೇಲೆ ಮಾಡಿದ ಹಿಂಸಾಚಾರ. ನಾವು ಭಾರತೀಯರೆಲ್ಲ ತುಂಬ ಹಗುರವಾಗಿ ತೆಗೆದುಕೊಂಡಿರುವ ಪ್ರಜಾಪ್ರಭುತ್ವ ಬೇಕೆಂದು ಆಶಿಸಿ ಶಾಂತಿಯಿಂದ ಪ್ರತಿಭಟಿಸಲು ಹೋದ ನೂರಾರು ವಿದ್ಯಾರ್ಥಿಗಳು, ಬುದ್ಧಿಜೀವಿಗಳು ಮಾತ್ರವಲ್ಲದೆ ಸಾಮಾನ್ಯ ಜನರೂ ಪ್ರಾಣ ಕಳೆದುಕೊಂಡ, ಇನ್ನೂ ಜೈಲಿನಲ್ಲೇ ಕೊಳೆಯುತ್ತಿರುವ, ನಾಪತ್ತೆಯಾಗಿರುವ ಘಟನೆ.
ಆ ಟಿಯಾನನ್ಮೆನ್ ಸ್ಕ್ವೇರ್‍ ಪ್ರತಿಭಟನೆಯಲ್ಲಿ ಕಮ್ಯುನಿಸ್ಟ್ ಸರ್ಕಾರ ಮತ್ತು ವಿದ್ಯಾರ್ಥಿಗಳ ಮಧ್ಯೆ ಸೇತುವೆಯಾಗಿದ್ದ, ನೂರಾರು ಪ್ರತಿಭಟನಾಕಾರರನ್ನು ಹಿಂಸೆಯಿಂದ ರಕ್ಷಿಸಿದ ಶಿಕ್ಷಕ ನೊಬೆಲ್ ಶಾಂತಿ ಪುರಸ್ಕೃತ ಲಿಯು ಕ್ಸಿಯಾಬೋನನ್ನು ಇಷ್ಟು ವರ್ಷ ಪದೇ ಪದೇ ಜೈಲಿಗಟ್ಟಿದ ಚೀನಾ ಸರ್ಕಾರ ಮೊನ್ನೆ ಕ್ಯಾನ್ಸರ್‌ ಚಿಕಿತ್ಸೆಗಾಗಿ ಪರೋಲ್ ಮೇಲೆ ಜೈಲಿನಿಂದ ಕಳಿಸಿತು. ಆದರೆ ಕೊನೆ ಹಂತದಲ್ಲಿರುವ ಅವನ ಕ್ಯಾನ್ಸರ‍್‍ಗೆ ಸರ್ಕಾರ ಹೇಳಿದ ಆಸ್ಪತ್ರೆಯಲ್ಲೇ ನಾಮಕಾವಾಸ್ತೆ ಚಿಕಿತ್ಸೆ ಕೊಡಲಾಗುತ್ತಿದೆ.
ಮಾನವ ಹಕ್ಕು ಅನ್ನೋ ಪದವನ್ನು ತಮ್ಮ ಶಬ್ದಕೋಶದಲ್ಲೇ ಇರಗೊಡದ ಚೀನಾ ಸರ್ಕಾರ ತನ್ನ ವಿರುದ್ಧ ಬರೆದ, ಮಾತನಾಡಿದ ಯಾರನ್ನೂ ಬಿಟ್ಟಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಪರವಾಗಿ ಮಾತನಾಡಿದ ಸಾವಿರಾರು ವಕೀಲರು, ಪತ್ರಕರ್ತರು, ಕಲಾವಿದರು, ಚಳುವಳಿಗಾರರು ಇವತ್ತಿಗೂ ಏನಾದರೆಂದು ಅವರ ಮನೆಯವರಿಗೂ ಗೊತ್ತಿಲ್ಲ. ಕೆಲವರು ಜೈಲಿನಲ್ಲಿ ಜೀವಂತ ಶವವಾಗಿ ವರ್ಷಗಟ್ಟಲೆ ಉಳಿದರೆ, ಹಲವರು ದೇಶ ಬಿಟ್ಟು ಹೋಗಿದ್ದಾರೆ. ಇನ್ನುಳಿದವರು ಮತ್ತೆಂದೂ ಬರದಂತೆ ಕಾಣೆಯಾಗಿದ್ದಾರೆ.
ವ್ಯಾಟಿಕನ್ ಕಳುಹಿಸುವ ಕ್ರಿಶ್ಚಿಯನ್‍ ಪಾದ್ರಿಗಳೂ ಕಾಣೆಯಾಗುತ್ತಾರೆ; ಯಾಕೆಂದರೆ ಚೀನಾ ವ್ಯಾಟಿಕನ್‍ ಚರ್ಚನ್ನು ತಿರಸ್ಕರಿಸಿ ತನ್ನದೇ ಚರ್ಚ್ ಸ್ಥಾಪನೆ ಮಾಡಿಕೊಂಡಿದೆ. ಇನ್ನು ಅಲ್ಲಿ ಇರುವ ಮುಸ್ಲಿಮರು ತಮ್ಮ ಧರ್ಮದ ಚಿಹ್ನೆ ದಾಡಿ ಇಟ್ಟುಕೊಳ್ಳುವಂತಿಲ್ಲ. ಹೆಂಗಸರು ಬುರ್ಖಾ ಹಾಕುವಂತಿಲ್ಲ. ಮುಸ್ಲಿಮ್ ಹೆಸರನ್ನು ಮಕ್ಕಳಿಗೆ ಇಡುವಂತಿಲ್ಲ. ರಂಜಾನ್‍ ಹಬ್ಬಕ್ಕೆ ಉಪವಾಸ ಮಾಡುವಂತಿಲ್ಲ.
’ಬರಿಗಾಲ ವಕೀಲ’ ಎಂದೇ ಚೀನಾದಲ್ಲಿ ಖ್ಯಾತನಾಗಿರುವ ಚೆನ್ ಗ್ವಾಂಗ್‍ಚೆಂಗ್‍ ಸರ್ಕಾರದ ವಿರುದ್ಧದ ಹೋರಾಟಕ್ಕಾಗಿ ಅನುಭವಿಸಿದ ಕಷ್ಟಗಳು ಒಂದೆರಡಲ್ಲ. ಬಾಲ್ಯದಿಂದಲೇ ಕುರುಡನಾದ ಚೆನ್‍ ಅಂಗವಿಕಲ ಹಕ್ಕುಗಳಿಗಾಗಿ, ಚೀನಾದ ’ಒಂದೇ ಮಗು’ ಶಾಸನದ ಮತ್ತು ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿದ. ಅವನ ಜನಪ್ರಿಯತೆಗೆ ಹೆದರಿದ ಸರ್ಕಾರ ಅವನನ್ನು ಅಪಹರಿಸಿ, ಚಿತ್ರಹಿಂಸೆ ಕೊಟ್ಟು ಗೃಹಬಂಧನದಲ್ಲಿಟ್ಟಿತು. ಆದರೂ ತನ್ನ ಹೋರಾಟ ಬಿಡದ ಚೆನ್‍ ಏಳು ವರ್ಷದ ನಂತರ ಒಂದು ದಿನ ತನ್ನ ಮನೆಯಿಂದ ಕಾವಲುಗಾರರ ಕಣ್ಣುತಪ್ಪಿಸಿ ನೆಲದ ಮೇಲೆ ತೆವಳಿಕೊಂಡು ತನ್ನ ಊರು ದಾಟಿ, ಅಮೇರಿಕಾದ ಎಂಬೆಸಿ ಸೇರಿ ಅಲ್ಲಿಂದ ಅಮೇರಿಕಾಗೆ ತೆರಳಿದ. ಅಲ್ಲಿಂದ ತನ್ನ ಹೋರಾಟವನ್ನು ಮುಂದುವರೆಸಿದ. ಟೈಮ್‍ ಮ್ಯಾಗಜೀನ್‍ನ ’ತಮ್ಮ ಶಕ್ತಿ, ಬುದ್ಧಿವಂತಿಕೆ ಮತ್ತು ನೈತಿಕ ಉದಾಹರಣೆಗಳಿಂದ ಜಗತ್ತನ್ನು ಬದಲಾಯಿಸಿದ ನೂರು ಮಂದಿ’ಯಲ್ಲಿ ಚೆನ್ ಕೂಡ ಒಬ್ಬ.
ಇಂತಹ ಉದಾಹರಣೆಗಳು ಚೀನಾದಲ್ಲಿ ಸಾವಿರಾರು. ಹೊಡೆತ, ಉಪವಾಸ, ನಿದ್ರೆ-ನೀರು-ಔಷಧಿ ಕೊಡದೆ ಚಿತ್ರಹಿಂಸೆಗಳು, ಒತ್ತಾಯದ ತಪ್ಪೊಪ್ಪಿಗೆ ಇವೆಲ್ಲದರಿಂದ ನರಳಿ ಕೊನೆಗೂ ಬಿಡುಗಡೆಯಾದ ಸ್ವೀಡನ್‍ನ ಎನ್‍ಜಿಒ ಒಂದರ ಮಾನವ ಹಕ್ಕು ಕಾರ್ಯಕರ್ತ ಪೀಟರ‍್ ಡಾಹ್ಲಿನ್‍ನಂತಹ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು 2012-2015ರ ಅವಧಿಯಲ್ಲಿ ಚೀನಾ ಬಂಧಿಸಿದೆ.
ಅಲ್ಲಿನ ಟೀವಿ ಚಾನಲ್‍ಗಳು ’ಅತಿ ಮನೋರಂಜಿತ’ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ ಮತ್ತು ದಿನಾ ಎರಡು ಗಂಟೆ ಕಮ್ಯುನಿಸ್ಟ್ ಪಾರ್ಟಿಗೆ ಸಂಬಂಧಪಟ್ಟ ನ್ಯೂಸ್‍ ಹಾಕಲೇಬೇಕು. ಚಿತ್ರಮಂದಿರಗಳಲ್ಲಿ ಜುಲೈ ೧ರಿಂದ ಕಮ್ಯುನಿಸ್ಟ್ ಪಾರ್ಟಿಗೆ ಮತ್ತು ಸಮಾಜವಾದಕ್ಕೆ ಸಂಬಂಧಪಟ್ಟ ವೀಡಿಯೋಗಳನ್ನು ಕಡ್ಡಾಯವಾಗಿ ನೋಡಲೇಬೇಕು. ನಮ್ಮಲ್ಲಿ ಮೋದಿ ಸರ್ಕಾರ ತನ್ನ ಪಾರ್ಟಿ ಸಿದ್ಧಾಂತಗಳನ್ನು ಸಿನೆಮಾ ಹಾಲ್‍ಗಳಲ್ಲಿ ತೋರಿಸಲು ಪ್ರಾರಂಭಿಸಿದರೆ ಆಗುವ ಪ್ರತಿಭಟನೆಗಳನ್ನು ಊಹಿಸಿಕೊಳ್ಳಿ.
ಅಲ್ಲಿ ಫೇಸ್‍ಬುಕ್‍, ಟ್ವಿಟ್ಟರ‍್ ಇಲ್ಲ, ಸರ್ಕಾರಿ ಪ್ರಾಯೋಜಿತ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿನ ಸರ್ಕಾರದ ವಿರುದ್ಧ ಮಾತನಾಡುವಂತಿಲ್ಲ. ಕಡ್ಡಿಯನ್ನು ಗುಡ್ಡ ಮಾಡಿ, ನೋಡಿ ಈ ಗುಡ್ಡ ನಿಮ್ಮನ್ನೇ ಹೂತುಹಾಕುತ್ತದೆ ಎಂದು ಹೆದರಿಸುವ, ವಾಕ್ ಮತ್ತು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಸಿಕ್ಕಾಪಟ್ಟೆ ಮಾತಾಡುವ ನಮ್ಮ ಕುಬುದ್ಧಿಜೀವಿಗಳು ಒಮ್ಮೆ ಚೀನಾಕ್ಕೆ ಹೋಗಿ ಇರಬೇಕು. ಅಲ್ಲಿನ ರಸ್ತೆ, ಸಬ್‍ವೇ, ವಿಮಾನ ನಿಲ್ದಾಣ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರವಲ್ಲ ನೀವು ಮೂತ್ರ ವಿಸರ್ಜನೆಗೆ ಹೋದರೆ ಅಲ್ಲೂ ನಿಮ್ಮನ್ನು ಸರ್ಕಾರ ಹದ್ದಿನ ಕಣ್ಣಿಂದ ನೋಡ್ತಾ ಇರುತ್ತದೆ. ಎಲ್ಲಿಯೂ ನಿಮ್ಮದೇ ಎನ್ನುವ ಏಕಾಂತ ಇಲ್ಲ.
ಮೋದಿ ಪ್ರಧಾನಿಯಾದ ಮೇಲೆ ನಮ್ಮ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಅಂತ ಬೊಬ್ಬೆ ಹೊಡೆಯೋ, ಎಸಿ ನ್ಯೂಸ್‍ ರೂಮ್‍ಗಳಿಂದ ಹೊರಗೇ ಹೋಗದಿರೋ armchair journalistಗಳು ಹುಡುಕಿ ತೆಗೆಯಬೇಕಾದದ್ದು, ಭಾರತದಲ್ಲಿ ಎಷ್ಟು ಜನ ಸರ್ಕಾರದ ವಿರುದ್ಧ ಮಾತಾಡಿದ್ದಕ್ಕಾಗಿ, ಪ್ರತಿಭಟಿಸಿದ್ದಕಾಗಿ ಜೈಲಿನಲ್ಲಿದ್ದಾರೆ? ಮಾಸ್ಕೋದ ರೆಡ್‍ ಸ್ಕ್ವೇರ್‍ ಮಧ್ಯೆ ನಿಂತು ಅಲ್ಲಿನ ಕ್ರಾಂತಿಯನ್ನು ನೆನೆಸಿಕೊಂಡು ರೋಮಾಂಚನಗೊಳ್ಳುವ ಅರುಂಧತಿ ರಾಯ್‍ ಆಗಲೀ, ’ಭಾರತ್‍ ಕೀ ಬರ್ಬಾದೀ’ ಎಂದು ಅರಚಿಕೊಳ್ಳುವ ’ವಿದ್ಯಾರ್ಥಿ’ಗಳಾಗಲೀ ಮತ್ತು ಅವರಿಗೆ ಬೆನ್ನಾಗಿ ನಿಂತು ಬೆಂಕಿಯಿಲ್ಲದ ಒಲೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುವ ನಮ್ಮ ಪತ್ರಕರ್ತರಾಗಲೀ ನೆನಪಿಡಬೇಕಾದದ್ದು, ನಮ್ಮ ದೇಶದಲ್ಲಿ ಅಸಹಿಷ್ಣುತೆ ಇದ್ದಿದ್ದರೆ, ಬಿಜೆಪಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಪ್ರಯತ್ನಿಸುತ್ತಿದ್ದರೆ, ಅವರೆಲ್ಲ ಇಷ್ಟು ಹೊತ್ತಿಗೆ ಚೀನಾದ ಹೋರಾಟಗಾರರ ತರ ’ಶಾಶ್ವತವಾಗಿ ಕಾಣೆಯಾದವರ’ ಪಟ್ಟಿಯಲ್ಲಿ ಒಂದು ಫೋಟೋ ಆಗಿರುತ್ತಿದ್ದರು. ಅರುಂಧತಿ ರಾಯ್‍ ಮೋದಿಯನ್ನು ಪರೋಕ್ಷವಾಗಿ ಬೈದು ತನ್ನ ಹೊಸ ಪುಸ್ತಕ ಬರೆಯುತ್ತಿರಲಿಲ್ಲ. ಕನ್ಹಯ್ಯ ಕುಮಾರ್ ನಿರಾಳವಾಗಿ ಪಿಎಚ್‍ಡಿ ಮುಗಿಸಲು ಓದುತ್ತಿರಲಿಲ್ಲ.
ಇವರೆಲ್ಲ ಬೆಂಬಲಿಸುತ್ತಿರೋ ಸಿದ್ಧಾಂತದ ಹರಿಕಾರ ಮಾವೋ ಚೀನಾವನ್ನು ತನ್ನ ತತ್ವಗಳ ಚೌಕಟ್ಟಿನೊಳಗೆ ಬಂಧಿಸುವ ಪ್ರಯತ್ನದಲ್ಲಿ ಬಲಿಯಾದವರು ಬರೋಬ್ಬರಿ ಮೂರು ಕೋಟಿ ಅರವತ್ತು ಸಾವಿರ ಜನ. ಅದೇ ಚೀನಾದ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ನಮ್ಮ ಬುದ್ಧಿಜೀವಿಗಳ್ಯಾರೂ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮಾತಾಡುವುದಿಲ್ಲ. ಎಷ್ಟೇ ಆದರೂ ಅಮೇರಿಕಾದ ಸಿಐಎ ಹೊರಹಾಕಿದ ದಾಖಲೆಗಳ ಪ್ರಕಾರ 1962ರ ಭಾರತ-ಚೀನಾ ಯುದ್ಧದಲ್ಲಿ ಚೀನಾಕ್ಕೆ ಬೆಂಬಲ ಸೂಚಿಸಿದ, ದೇಶಕ್ಕಿಂತ ಸಿದ್ಧಾಂತವೇ ಮುಖ್ಯ ಎನ್ನುವ, ಆದರೆ ತಮ್ಮ ಸಿದ್ಧಾಂತದ ಎದುರು ಬಂದ ಜನಸಾಮಾನ್ಯರನ್ನು ಹೊಸಕಿ ಹಾಕಲು ’ಮಾನವ ಹಕ್ಕು’ ಅಡ್ದ ಬರದೆ ಇರುವ ಅತಿಬುದ್ಧಿಜೀವಿಗಳಲ್ಲವೇ ನಮ್ಮವರು? ಫ್ರೆಂಚ್‍ ತತ್ವಜ್ಞಾನಿ ವಾಲ್ಟೇರ‍್ ಹೇಳಿದಂತೆ, "ಮೂರ್ಖರನ್ನು ಅವರೇ ಪೂಜಿಸುವ ಸರಪಳಿಗಳಿಂದ ಬಿಡುಗಡೆಗೊಳಿಸುವುದು ಅಸಾಧ್ಯ."
ಈಗ ಚೀನಾ ಮತ್ತೆ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ. ಟಿಬೆಟ್‍ ಅವರದಾಯಿತು, ಪಾಕ್‍ ಆಕ್ರಮಿತ ಕಾಶ್ಮೀರದಲ್ಲಿ ಬಂದು ಕೂತಾಯಿತು. ಈಗ ಭೂತಾನ್‍ ಮತ್ತು ಸಿಕ್ಕಿಂ ಮೇಲೆ ಕಣ್ಣು ಹಾಕಿದೆ. ನಮ್ಮೊಳಗೇ ಟೊಳ್ಳಿರುವಾಗ ಹೊರಗಿನವರು ಕೊಟ್ಟ ಪೆಟ್ಟು ಬೇಗ ತಾಗುತ್ತದೆ. ದೇಶಪ್ರೇಮವೂ ಅಪಹಾಸ್ಯಕ್ಕೊಳಗಾದ ಈ ಸಮಯದಲ್ಲಿ ನನಗೆ ಚೀನಾದ ಎದುರು 1962ರಲ್ಲಿ ಕಾಲಿಗೆ ಬೂಟುಗಳಿಲ್ಲದೆ, ಚಳಿಗೆ ಉಣ್ಣೆಯ ಬಟ್ಟೆಯಿಲ್ಲದೆ, ಯುದ್ಧ ಶುರುವಾದರೆ ಕಿಸೆಯಲ್ಲಿ ಕೇವಲ ಅರ್ಧ ಗಂಟೆ ಮಾತ್ರ ಹೋರಾಡುವಷ್ಟು ಬುಲೆಟ್‍ಗಳನ್ನಿಟ್ಟುಕೊಂಡು ಸೋತ ಆ ಭಾರತೀಯ ಸೈನಿಕ ಮತ್ತೆ ಮತ್ತೆ ನೆನಪಾಗುತ್ತಾನೆ.

Wednesday, June 7, 2017

ಶಾಂತಿಮಂತ್ರ ಬರೀ ನಮಗೇಕೆ?

ಅದು ಆಗಸ್ಟ್ 1914. ಒಂದು ಕೊಲೆಯ ಕಿಡಿ ಹೊತ್ತಿ ಉರಿದು ಇಡೀ ವಿಶ್ವವನ್ನೇ ಸುಡುವ ಮೊದಲನೇ ವಿಶ್ವಯುದ್ಧಕ್ಕೆ ನಾಂದಿ ಹಾಡಿದ ಸಮಯ. ಆಗ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹೊರಟಿದ್ದ ಗಾಂಧೀಜಿ ಸುದ್ದಿ ತಿಳಿದ ತಕ್ಷಣವೇ ಈ ಯುದ್ಧದಲ್ಲಿ ಬ್ರಿಟೀಷರ ಬೆಂಬಲಕ್ಕೆ ನಿಲ್ಲುವ ನಿರ್ಧಾರಕ್ಕೆ ಬರುತ್ತಾರೆ. ಇಂಗ್ಲೆಂಡ್ ತಲುಪಿದ ಕೂಡಲೆ ಗಾಯಗೊಂಡ ಸೈನಿಕರಿಗೆ ವೈದ್ಯಕೀಯ ನೆರವು ನೀಡಲು ಮುಂದಾಗುತ್ತಾರೆ.
ಅಲ್ಲಿಂದ ಆರೋಗ್ಯ ಕೆಟ್ಟು ಭಾರತಕ್ಕೆ ಮರಳಿದರೂ ಸುಮ್ಮನಿರದೆ ಗಾಂಧೀಜಿ, ಬ್ರಿಟೀಷರ ಕಷ್ಟಕಾಲದಲ್ಲಿ ಅವರಿಗೆ ಸಹಾಯ ಮಾಡಬೇಕೆಂದು ನೂರಾರು ಹಳ್ಳಿ, ಪಟ್ಟಣಗಳನ್ನು ತಿರುಗಿ ಭಾರತೀಯ ಸೇನೆಗೆ ಸೇರಲು ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಹುರಿದುಂಬಿಸುತ್ತಾರೆ. "ನಿಮ್ಮ ಗಂಡ ಬ್ರಿಟಿಷ್‍ ಸಾಮ್ರಾಜ್ಯದ ಪರವಾಗಿ ಯುದ್ಧದಲ್ಲಿ ಬಲಿಯಾದರೆ ಅವರೇ ನಿಮಗೆ ಮುಂದಿನ ಜನ್ಮದಲ್ಲಿ ಪತಿಯಾಗಿ ಸಿಗುತ್ತಾರೆ" ಎಂದು ತನ್ನ ಭಾಷಣ ಕೇಳಲು ಬಂದ ಹೆಣ್ಣುಮಕ್ಕಳಲ್ಲಿ ಬೇಡಿಕೊಳ್ಳುತ್ತಾರೆ. ಇದರ ಪರಿಣಾಮ...
ಅಪರಿಚಿತ ನೆಲ, ಕಂಡರಿಯದ ಜನ, ಅರ್ಥವಾಗದ ಭಾಷೆ, ಮರಗಟ್ಟುವ ಚಳಿ, ತೊಡಲು ಹತ್ತಿಯ ತೆಳ್ಳಗಿನ ಬಟ್ಟೆ. ಅಲ್ಲಿಯವರೆಗೂ ಗನ್‍ ಹಿಡಿದು ಗೊತ್ತಿಲ್ಲದ, ಯುದ್ಧದ ಬಗ್ಗೆ ಅರಿವೇ ಇಲ್ಲದ ಅಮಾಯಕ ಭಾರತೀಯರು ಗಾಂಧೀಜಿಯ ಕರೆಗೆ ಓಗೊಟ್ಟು ವಿಶ್ವಯುದ್ಧದ ಮುಂಚೂಣಿಯಲ್ಲಿ ಗುಂಡಿಗೆ ಎದೆ ಕೊಟ್ಟು ನಿಲ್ಲುತ್ತಾರೆ.  ಫ್ರಾನ್ಸ್, ಬೆಲ್ಜಿಯಂ, ಆಫ್ರಿಕಾ, ಮೆಸೊಪೊಟೇಮಿಯಾ, ಈಜಿಪ್ಟ್ ದೇಶಗಳಲ್ಲಿ ಬ್ರಿಟಿಷ್‍ ಸೈನಿಕ ತಲುಪುವ ಮೊದಲೇ ಶತ್ರುಗಳನ್ನು ತಡೆದು ನಿಲ್ಲಿಸುತ್ತಾರೆ. ನಮ್ಮೆದುರು ನಿಲ್ಲಲು ಈ ಕಂದು ಬಣ್ಣದ ಸೈನಿಕರಲ್ಲೆಲ್ಲಿ ಧೈರ್ಯವಿದೆ ಎಂದು ಹಂಗಿಸಿ ಮಾತಾಡಿದ ಜರ್ಮನ್ ಸೈನಿಕರೂ ಕೊನೆಗೆ ಅವರ ಸಾಹಸಗಳ ಎದುರು ಸೋಲೊಪ್ಪಿಕೊಳ್ಳುತ್ತಾರೆ.
ಈ ಯುದ್ಧದಲ್ಲಿ ಹೋರಾಡಿದ ಬರೋಬ್ಬರಿ 15 ಲಕ್ಷ ಭಾರತೀಯ ಸೈನಿಕರಲ್ಲಿ ಸುಮಾರು 75,000 ಸೈನಿಕರು ಯುದ್ಧಕಂದಕಗಳಲ್ಲಿ, ಚಳಿ-ಮಲೇರಿಯಾಗಳಿಂದ, ಕೈ-ಕಾಲು ಮುರಿದುಕೊಂಡು ಸರಿಯಾದ ಚಿಕಿತ್ಸೆ ಇಲ್ಲದೆ, ಗಾಯಗಳು ಕೊಳೆತು ಪ್ರಾಣ ಬಿಡುತ್ತಾರೆ.
ಯುದ್ಧಕಂದಕಗಳಲ್ಲಿ ತನ್ನ ಜೊತೆಯವರನ್ನು ಕಣ್ಣೆದುರೇ ಕಳೆದುಕೊಂಡ ಸೈನಿಕನೊಬ್ಬ ಪತ್ರದಲ್ಲಿ, "ಶವಗಳು ಕತ್ತರಿಸಿ ಹಾಕಿದ ಜೋಳದ ತೆನೆಗಳ ತರ ನೆಲದ ತುಂಬಾ ಹರಡಿವೆ" ಎಂದು ಹತಾಶನಾಗಿ ಬರೆಯುತ್ತಾನೆ. ನೊಂದ ಸೈನಿಕನೊಬ್ಬ ಬ್ರಿಟನ್‍ ರಾಜ ಐದನೇ ಜಾರ್ಜ್‍ಗೆ ಪತ್ರ ಬರೆದು, "...ಕೇವಲ 11 ರೂಪಾಯಿಗೆ ನಾವು ಪ್ರಾಣ ಬಿಡುತ್ತಿದ್ದೇವೆ. ಗಾಯಗೊಂಡ ಸೈನಿಕರನ್ನೂ ಪದೇ ಪದೇ ಯುದ್ಧಕ್ಕೆ ಕಳುಹಿಸುತ್ತಾರೆ," ಎಂದು ದೂರುತ್ತಾನೆ.
ನಮ್ಮ ಸೈನಿಕ ತನ್ನ ದೇಶಕ್ಕಾಗಿ ಮಡಿಯಲಿಲ್ಲ. ಯಾರದ್ದೋ ರಾಜಕೀಯ ಲೆಕ್ಕಾಚಾರಗಳಲ್ಲಿ ಕೇವಲ ಅಂಕಿ-ಸಂಖ್ಯೆಯ ಭಾಗವಾಗಿ ಹೋದ. ಬದುಕಿದವರು ಭಾರತಕ್ಕೆ ಮರಳುವಷ್ಟರಲ್ಲಿ ಇಲ್ಲಿನ ರಾಜಕೀಯ ವಾತಾವರಣವೇ ಬೇರೆಯಾಗಿತ್ತು. ಅವರಿಗೆ ಹೀರೋಗಳ ಸ್ವಾಗತ ಬಿಡಿ, ಬ್ರಿಟೀಷರಿಗೆ ಸಹಕರಿಸಲು ಹೋದವರೆಂದು ಜನ ತುಚ್ಚವಾಗಿ ಕಂಡರು, ಹಂಗಿಸಿದರು. ಅಷ್ಟೊತ್ತಿಗೆ ಗಾಂಧೀಜಿಗೂ ಗೊತ್ತಾಗಿತ್ತು ತಾವು ಸಹಾಯ ಮಾಡಲು ಹೊರಟ ತಮ್ಮ ಚಕ್ರವರ್ತಿಯ ನಿಜರೂಪ. ಭಾರತೀಯ ಸೈನ್ಯ ಇಲ್ಲದಿದ್ದರೆ ಬ್ರಿಟನ್‍ ಆ ಯುದ್ಧ ಗೆಲ್ಲಲು ಸಾಧ್ಯವಿರಲಿಲ್ಲ. ಆದರೂ ಸಹಾಯ ಮಾಡಿದ್ದಕ್ಕೆ ಸ್ವಾಯತ್ತತೆ ಬಿಡಿ, ನಮಗೆ ಸಿಕ್ಕಿದ್ದು ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ, ತುರ್ತುಪರಿಸ್ಥಿತಿ, ಪತ್ರಿಕೆಗಳ ಮೇಲೆ ನಿರ್ಬಂಧ, ಕೋರ್ಟ್‍ ವಿಚಾರಣೆಯೇ ಇಲ್ಲದೆ ಶಿಕ್ಷೆ. ಒಂದು ಕಡೆ ಬರಗಾಲ. ದೇಶದ ಹಣವನ್ನು ಯುದ್ಧಕ್ಕೆ ಸುರಿದಿದ್ದರಿಂದ ಆದ ಹಣದುಬ್ಬರ, ಅದರ ಪರಿಣಾಮ ಬಾಂಬೆ, ಮದ್ರಾಸ್‍, ಬಂಗಾಳದಲ್ಲಿ ಆಹಾರಕ್ಕಾಗಿ ದಂಗೆ.
ಇಷ್ಟಕ್ಕೇ ನಿಲ್ಲಲಿಲ್ಲ ನಮ್ಮ ದಾಸ್ಯದ ಕಥೆ. ಮತ್ತೆ ಸಣ್ಣ ಪುಟ್ಟ ಯುದ್ಧಗಳಲ್ಲಿ ಮಾತ್ರವಲ್ಲದೆ, ನಮ್ಮ ಸೈನಿಕರು ಎರಡನೇ ಮಹಾಯುದ್ಧದಲ್ಲೂ ಬ್ರಿಟಿಷರ ಅಡಿಯಲ್ಲಿ ಇಟೆಲಿ, ಜಪಾನ್‍ ಮತ್ತು ಜರ್ಮನ್‍ ಸೈನ್ಯಗಳ ವಿರುದ್ಧ ಹೋರಾಡಿ ಗೆಲ್ಲುತ್ತಾರೆ. ಇಂಫಾಲ್‍ ಮತ್ತು ಕೊಹಿಮಾ ಮೇಲೆ ಆಕ್ರಮಣ ಮಾಡಿದ ಜಪಾನೀಯರು ಸೋತು ಹಿಮ್ಮೆಟ್ಟುತ್ತಾರೆ. ಪಾಲ್ಗೊಂಡ 2.5 ಲಕ್ಷ ಭಾರತೀಯ ಸೈನಿಕರಲ್ಲಿ ಸುಮಾರು 24,000 ಸೈನಿಕರು ಸಾಯುತ್ತಾರೆ.
ಇದೆಲ್ಲ ಸ್ವಾತಂತ್ರ್ಯ ಸಿಗುವ ಮೊದಲಿನ ಮಾತಾಯಿತು, ಈಗ್ಯಾಕೆ ಅದರ ಪ್ರಸ್ತಾಪ ಅನ್ನಿಸಬಹುದು. ಆಗ ಬ್ರಿಟಿಷರು ಕಟ್ಟಿದ ದಾಸ್ಯ ಸಂಕೋಲೆಯಲ್ಲಿ ನಾವಿದ್ದರೆ, ಈಗ ’ಶಾಂತಿಮಂತ್ರ’ ಎನ್ನುವ ನಾವೇ ಬಿಗಿದುಕೊಂಡ ಸಂಕೋಲೆಯಲ್ಲಿ ಸಿಕ್ಕಿಕೊಂಡಿದ್ದೇವೆ. ಭಾಷಣ ಮಾಡುವವರೆಲ್ಲ ’ಭಾರತ ಶಾಂತಿಯುತ ದೇಶ, ಶಾಂತಿ ಇಷ್ಟಪಡುವ ದೇಶ’ ಎಂದು ಉರುಹೊಡೆಯುವುದನ್ನು ಕೇಳಿರಬಹುದು. ಅದಕ್ಕೇ ಇರಬೇಕು ನಮ್ಮ ದೇಶದಿಂದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಕಳುಹಿಸಿರುವ ಪಡೆಗಳ ಸಂಖ್ಯೆಯೇ 1,80,000.
ಆಗ ಕೃತಘ್ನ ಬ್ರಿಟೀಷರಿಗೋಸ್ಕರ ನಮ್ಮ ಸೈನಿಕರು ಜೀವ ಕಳೆದುಕೊಂಡರೆ, ಈಗ ಜಗತ್ತಿನ ದೊಡ್ಡಣ್ಣರೆಲ್ಲ ನಮ್ಮ ಮೇಲೆ ಸವಾರಿ ಮಾಡಲು ನಾವೇ ಅನುವು ಮಾಡಿಕೊಡುತ್ತಿದ್ದೇವೆ. ಯಾವುದೋ ದೇಶಗಳು, ಅವರ ರಾಜಕೀಯ ಆಟಗಳು... ಅವರಿಗೇ ಬೇಡದ ಶಾಂತಿಯನ್ನು ಕಾಪಾಡಲು ನಾವು, so-called ಮೂರನೇ ಜಗತ್ತಿನ ಸೈನಿಕರು, ಪೋಲೀಸರು ಜೀವದ ಮೇಲಿನ ಆಸೆ ಬಿಟ್ಟು ವರ್ಷಗಟ್ಟಲೆ ಅಲ್ಲಿನ ನಾಗರಿಕ ಸಮಾಜವನ್ನು ಹಗಲೂ-ರಾತ್ರಿ ಕಾಯಬೇಕು.
ಜಗತ್ತಿನಲ್ಲೇ ಅತಿ ಹೆಚ್ಚು, ಅಂದರೆ ಸುಮಾರು 158 ಭಾರತೀಯ ಶಾಂತಿಪಾಲಕರು (Peacekeepers), 49 ಬೇರೆ ಬೇರೆ ಕಾರ್ಯಾಚರಣೆಗಳಲ್ಲಿ ಯಾವುದೋ ದೇಶಗಳಲ್ಲಿ ಪ್ರಾಣ ತೆತ್ತಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಮೌಮೂನ್‍ ಅಬ್ದುಲ್‍ ಗಯೂಮ್‍ರನ್ನು ಉಚ್ಚಾಟಿಸಲು ಮಾಡಿದ ಪ್ರಯತ್ನ ವಿಫಲಗೊಳಿಸಿದ್ದು ನಮ್ಮ ಶಾಂತಿಪಾಲಕರ ’ಆಪರೇಶನ್‍ ಕ್ಯಾಕ್ಟಸ್‍.’ ಶ್ರೀಲಂಕಾದಲ್ಲಿ LTTE ವಿರುದ್ಧ ಹೋರಾಟದಲ್ಲಿ ಸತ್ತಿದ್ದು ಸಾವಿರಕ್ಕೂ ಹೆಚ್ಚು ಶಾಂತಿಪಾಲಕರು. ಕಾಂಗೋ, ಸುಡಾನ್‍, ಐವರಿ ಕೋಸ್ಟ್, ಸೊಮಾಲಿಯಾ, ಇರಾಕ್‍, ಲಿಬೀರಿಯಾ, ಹೀಗೆ ಎಲ್ಲೆಲ್ಲಿ ಅವರ ಅಗತ್ಯ ಇದೆಯೋ ಅಲ್ಲೆಲ್ಲ ನಮ್ಮವರು ಅಲ್ಲಿನ ಸಾಮಾನ್ಯ ನಾಗರಿಕರಿಗೆ ಹಗಲು-ರಾತ್ರಿ ರಕ್ಷಣೆ ಕೊಟ್ಟಿದ್ದಾರೆ.
ಜಗತ್ತಿನ ಮೊದಲ ಮಹಿಳಾ ಶಾಂತಿಪಾಲನಾ ಪಡೆ ಭಾರತೀಯರದ್ದು. ವಿಶ್ವಸಂಸ್ಥೆಯಿಂದ ಮೆಚ್ಚುಗೆ ಪಡೆದು ಮೊನ್ನೆ ಫೆಬ್ರವರಿಗೆ ಹಿಂತಿರುಗಿದ ಈ ಪಡೆ ಒಂಬತ್ತು ವರ್ಷಗಳ ಕಾಲ ಲಿಬೀರಿಯಾದಲ್ಲಿ ನಾಗರಿಕ ರಕ್ಷಣೆ ಮಾತ್ರವಲ್ಲದೆ, ರಾತ್ರಿ ಗಸ್ತು ತಿರುಗುವುದು, ಅಲ್ಲಿನ ಪೋಲೀಸರಿಗೆ ತರಬೇತಿ ಕೊಡುತ್ತಿದ್ದುದು ಮಾತ್ರವಲ್ಲ, ಮನೆ ಬಿಟ್ಟು ಹೊರ ಬರಲು ಅಂಜುತ್ತಿದ್ದ ಅಲ್ಲಿನ ಮಹಿಳೆಯರಿಗೆ ಪೋಲೀಸ್‍ ಪಡೆ ಸೇರಲು ಸ್ಪೂರ್ತಿಯಾದರು.
ನಮ್ಮ ಶಾಂತಿಪಾಲನಾ ಪಡೆಗಳ ಸಂಬಳ, ಯೂನಿಫಾರ್ಮ್, ಶಸ್ತ್ರಾಸ್ತ್ರಗಳು, ತರಬೇತಿಯ ಖರ್ಚನ್ನೆಲ್ಲ ನಮ್ಮ ದೇಶವೇ ಕೊಟ್ಟು, ಜೊತೆಗೆ ವಿಶ್ವಸಂಸ್ಥೆಯ ಶಾಂತಿಪಾಲನೆ ಬಜೆಟ್‍ಗೆ ದೇಣಿಗೆ (2015-16ನೇ ಸಾಲಿನಲ್ಲಿ ಭಾರತ ವಿಶ್ವಸಂಸ್ಥೆಗೆ ರೂ. 256 ಕೋಟಿ ಕಡ್ಡಾಯ ದೇಣಿಗೆ ನೀಡಿದೆ) ಕೊಟ್ಟು ನಾವು ಅಮಾಯಕರ ಜೀವ ಉಳಿಸುವ ಪುಣ್ಯದ ಕೆಲಸವನ್ನೇನೋ ಮಾಡುತ್ತಿದ್ದೇವೆ. ಆದರೆ ವಿಶ್ವಸಂಸ್ಥೆಯಲ್ಲಿ ನಮಗೆ ನಮ್ಮ ಪಡೆಗಳ ನಿಯೋಜನೆಯ ಯಾವ ಸ್ವಾತಂತ್ರ್ಯವೂ ಇಲ್ಲ.
ಸುಮಾರು 7,713 ಸೈನಿಕರನ್ನು ನಿಯೋಜಿಸುವ ಮೂಲಕ ಇಥಿಯೋಪಿಯಾ ನಂತರ ಎರಡನೇ ಸ್ಥಾನದಲ್ಲಿರುವ ಭಾರತದ ಎದುರು ಜರ್ಮನಿ (434), ಯುನೈಟೆಡ್‍ ಕಿಂಗ್‍ಡಮ್‍ (336), ಕೆನಡಾ (103), ರಷ್ಯಾ (98) ಮತ್ತು ಯುಎಸ್‍ (40) ತರದ ’ದೊಡ್ಡಣ್ಣ’ಗಳ ಬಣ್ಣ ಶಾಂತಿಯ ತಿಳಿನೀರಿನಲ್ಲಿ ಯಾವಾಗಲೋ ತೊಳೆದುಕೊಂಡು ಹೋಗಿದೆ. ಅವರ ಸೈನಿಕರ ಜೀವ ಮಾತ್ರ ಅಮೂಲ್ಯ ಎಂದು ತಿಳಿದುಕೊಂಡಿರುವ ಆ ದೇಶಗಳು ಹಲ್ಲೇ ಇಲ್ಲದಿರುವ ಹಾವಾದ ವಿಶ್ವಸಂಸ್ಥೆಗೆ ಕೋಟಿಗಟ್ಟಲೆ ಹಣ ಸುರಿದು ಬಡರಾಷ್ಟ್ರಗಳಿಗೆ ಶಾಂತಿಯ ಮಂತ್ರ ಹೇಳಿಕೊಡುತ್ತಿವೆ.
ಅತ್ಯಂತ ಕಡಿಮೆ ಮತ್ತು ಹಾಸ್ಯಾಸ್ಪದ ಸಂಖ್ಯೆಯಲ್ಲಿ ಸೈನಿಕರನ್ನು ಶಾಂತಿಪಾಲನಾ ಪಡೆಗೆ ಕಳಿಸುತ್ತಿರುವ ಅಮೇರಿಕಾ, ಈ ವರ್ಷ ತಾನು ಕೊಡುವ ಹಣವನ್ನೂ ಕಡಿತಗೊಳಿಸುವ ಚಿಂತನೆ ನಡೆಸುತ್ತಿದೆ. ಆದರೂ ಹೊಸದಾಗಿ ನೇಮಕಗೊಂಡ ವಿಶ್ವಸಂಸ್ಥೆಯ ಅಮೇರಿಕ ರಾಯಭಾರಿ ಭಾರತೀಯ ಸಂಜಾತೆ ನಿಕ್ಕಿ ಹೇಲಿ ಪ್ರಕಾರ ’ಅಮೇರಿಕಾ ಜಗತ್ತಿನ ನೈತಿಕ ಆತ್ಮಸಾಕ್ಷಿ.’
ದೇಶ-ದೇಶಗಳ ನಡುವಿನ ಯುದ್ಧ, ಜಾತಿ-ಜನಾಂಗಗಳ ಸಂಘರ್ಷ, ಸಿದ್ಧಾಂತಗಳ ತಿಕ್ಕಾಟ,... ಏನೇ ಇರಲಿ,  ಅಲ್ಲೆಲ್ಲ ಸಾವು-ನೋವು, ಕ್ರೂರತನಕ್ಕೆ ಬಲಿಯಾಗುವವರು ಅಮಾಯಕರೇ. ಯಾವ ರಾಷ್ಟ್ರವೇ ಆಗಲಿ, ಅಲ್ಲಿನ ನಾಗರಿಕರನ್ನು ರಕ್ಷಿಸುವುದು ಯಾವುದೇ ದೇಶದ ಸಾಮಾನ್ಯ ಸೈನಿಕ ಹೆಮ್ಮೆಯಿಂದ ಮಾಡುವ ಕೆಲಸ. ಆದರೆ ಅದರಲ್ಲಿ ದೊಡ್ಡ-ಸಣ್ಣ ರಾಷ್ಟ್ರಗಳ ಸಮಪಾಲು ಇರಬೇಕು. ನಾಗರಿಕರ ಜೀವದ ತರ, ಸೈನಿಕನ ಜೀವವೂ ಅತ್ಯಮೂಲ್ಯವೇ. ಒಂದು ಕಡೆ ಬೆನ್ನ ಹಿಂದಿಂದ ಯುದ್ಧಕ್ಕೆ ಕುಮ್ಮಕ್ಕು ಕೊಡುತ್ತಾ, ಇನ್ನೊಂದು ಕಡೆ ಯುದ್ಧದಲ್ಲಿ ಸಿಲುಕುವ ಅಮಾಯಕರನ್ನು ಕಾಪಾಡುವ ನಾಟಕವಾಡುವ ’ಹಿರಿಯಣ್ಣ’ರೆಲ್ಲ ಸೇರಿ, ಕಣ್ಣೆದುರೇ ಅನಾಚಾರಗಳು ನಡೆಯುತ್ತಿದ್ದರೂ ಅದನ್ನು ತಡೆಯುವ ಯಾವ ಅಧಿಕಾರವೂ ಕೊಡದೆ, ಶಾಂತಿಪಾಲನಾ ಪಡೆಯನ್ನು ಹೆಸರಿಗೆ ಮಾತ್ರ ನೇಮಿಸಿ ತಮ್ಮ ನೈತಿಕ ಹೊಣೆಯಿಂದ ಕಳಚಿಕೊಳ್ಳುವ ಬದಲು ಅವರಿಗೆ ಆ ಕ್ಷಣದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಕೊಟ್ಟರೆ ಆ ಪಡೆಯ ನೇಮಕ ಅರ್ಥಪೂರ್ಣವಾದೀತು. ಶಾಂತಿಯ ಹರವು ಹಿಂಸೆಯಿಂದ ನಲುಗಿದ ದೇಶಗಳಲ್ಲಿ ಹರಡೀತು.