Pages

Subscribe:

Ads 468x60px

Sunday, August 9, 2020

ಅಸ್ಮಿತೆಯೆಡೆಗೆ ಮಕ್ಕಳ ಮೊದಲ ಹೆಜ್ಜೆ ಐತಿಹಾಸಿಕ ಸತ್ಯಗಳಿಂದ ಆರಂಭವಾಗಲಿ

 ಗೆದ್ದವರು ಇತಿಹಾಸ ಬರೆಯುತ್ತಾರೆ ನಿಜ. ಆದರೆ ಸೋತವರು ಆ ಇತಿಹಾಸವನ್ನು ಮನಪೂರ್ತಿಯಾಗಿ ಒಪ್ಪಿಕೊಂಡರೆ? ದಾಸ್ಯದಿಂದ ಬಿಡುಗಡೆಗೊಂಡ ಮೇಲೂ ಅದನ್ನೇ ತಮ್ಮ ಮುಂದಿನ ಪೀಳಿಗೆಗೆ ಕಲಿಸಿಕೊಟ್ಟರೆ? ಜಗತ್ತಿನ ಅನೇಕ ಪ್ರಾಚೀನ ನಾಗರಿಕತೆಗಳು ಈಗ ಬರೀ ಇತಿಹಾಸವಾಗಿ ಉಳಿದಿರುವುದು ಆಕ್ರಮಣಕೋರರಿಂದಲ್ಲ; ಅವರ ಕ್ರೂರತೆಯನ್ನು ಅಡಗಿಸಿ ಅವರು ಕಟ್ಟಿದ ಕಥೆಗಳಿಗೆ ಒಪ್ಪಿಗೆಯ ಮುದ್ರೆಯೊತ್ತಿ ಅದನ್ನೇ ತಮ್ಮ ಇತಿಹಾಸವನ್ನಾಗಿ ಒಪ್ಪಿಕೊಂಡ, ಬರೆದಿಟ್ಟ, ಹಾಡಿ ಹೊಗಳಿದ ಆ ನಾಗರಿಕತೆಗಳ ವಾರಸುದಾರರಿಂದ. 

ಅಮೇರಿಕಾಗೆ ಯೂರೋಪಿಯನ್ನರಿಂದ ಸ್ವಾತಂತ್ರ್ಯ ಸಿಕ್ಕ ಮೇಲೆ ’ರೆಡ್‌ ಇಂಡಿಯನ್‌’ ಎಂದು ಕರೆಸಿಕೊಳ್ಳುವ ಅಲ್ಲಿನ ಸ್ಥಳೀಯ ಜನಾಂಗಗಳು ತಮ್ಮ ಜಾಗದ ಸ್ವಾಯತ್ತತೆಯನ್ನು, ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಅಮೇರಿಕಾ ದೇಶಕ್ಕೆ ಸೇರಲು ಒಪ್ಪಲಿಲ್ಲ. ಅವರನ್ನು ಶಕ್ತಿಯಿಂದ ಮಣಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಆಗ ಅಮೇರಿಕಾ ಅಧ್ಯಕ್ಷರಾಗಿದ್ದ ಜಾರ್ಜ್‌ ವಾಷಿಂಗ್ಟನ್‌ಗೆ ಹೊಳೆದದ್ದು ಮೂಲನಿವಾಸಿಗಳ ಜೊತೆ ಹೊಡೆದಾಡುವುದಕ್ಕಿಂತ ಅಗ್ಗವಾದ ಉಪಾಯ, ’ಶಿಕ್ಷಣ.’ ಅಮೇರಿಕಾ ಸರ್ಕಾರ ರೆಡ್‌ ಇಂಡಿಯನ್‌ ಮಕ್ಕಳನ್ನು ಎಳೆದು ತಂದು ಅವರಿಗಾಗಿಯೇ ಶುರು ಮಾಡಿದ ವಿಶೇಷ ಶಾಲೆಗಳಿಗೆ ಸೇರಿಸಿತು. ಒಪ್ಪದಿದ್ದ ಅಪ್ಪಂದಿರನ್ನು ಬಂಧಿಸಿ, ಮಕ್ಕಳನ್ನು ಪೊಲೀಸ್‌ ಸಹಾಯದಿಂದ ಕರೆದೊಯ್ಯಲಾಯಿತು. ಅಲ್ಲಿನ ಪ್ರತಿಯೊಂದು ಜನಾಂಗದ ಮಕ್ಕಳ ವಿಶಿಷ್ಟ ವೇಷಭೂಷಣಗಳನ್ನು ತೆಗೆಸಿ, ಅವರ ಕೂದಲು ಕತ್ತರಿಸಿ ಯೂರೋಪಿಯನ್‌ ವಸ್ತ್ರಗಳನ್ನು ಹಾಕಲಾಯಿತು, ಅವರವರ ಮಾತೃಭಾಷೆಗಳನ್ನು ಮಾತನಾಡುವುದನ್ನು ನಿಷೇಧಿಸಲಾಯಿತು. ಆಂಗ್ಲ ಭಾಷೆಯನ್ನು ಮಾತ್ರ ಕಡ್ಡಾಯ ಮಾಡಲಾಯಿತು. ಅವರ ಸಂಸ್ಕೃತಿ ಹೇಗೆ ಬಿಳಿಯರ ಸಂಸ್ಕೃತಿಗಿಂತ ಕೀಳು ಎನ್ನುವುದನ್ನು ಆ ಮಕ್ಕಳ ತಲೆಗೆ ತುಂಬಲಾಯಿತು. ಅವರ ದೇಸೀ ಹೆಸರುಗಳನ್ನು ಬದಲಾಯಿಸಿ ಅವರಿಗೆ ಇಂಗ್ಲೀಷ್ ಹೆಸರು ಇಡಲಾಯಿತು. ೧೫ನೇ ಶತಮಾನದ ಕೊನೆಗೆ ಸುಮಾರು ೩೦೦ ಭಾಷೆಗಳಿದ್ದ, ಒಂದೊಂದು ಜನಾಂಗಕ್ಕೂ ವಿಭಿನ್ನವಾಗಿದ್ದ ಮೂಲನಿವಾಸಿಗಳ ಸಂಸ್ಕೃತಿ ಈಗ ಆಂಗ್ಲಮಯವಾಗಿದೆ. ಬ್ರಿಟಿಷರು ಅದೇ ಉಪಾಯವನ್ನು ಭಾರತದಲ್ಲಿಯೂ ಪ್ರಯೋಗಿಸಿದರು ಮತ್ತು ಯಶಸ್ವಿಯೂ ಆದರು. ಅವರಿಗೆ ಗೊತ್ತಿತ್ತು ಒಂದು ನಾಗರಿಕತೆಯನ್ನು ನಾಶಮಾಡಲು ಅವರ ಇತಿಹಾಸಪ್ರಜ್ಞೆಯನ್ನು ಅಳಿಸಿಹಾಕಿದರೆ ಸರಿ ಎಂದು. 

ಇತಿಹಾಸಜ್ಞ ಧರಮ್‌ಪಾಲ್ ತಮ್ಮ ’ದಿ ಬ್ಯೂಟಿಫುಲ್‌ ಟ್ರೀ’ ಪುಸ್ತಕದಲ್ಲಿ ಸನಾತನ ಭಾರತೀಯ ಶಿಕ್ಷಣ ಪದ್ಧತಿಯ ಬಗ್ಗೆ ಬರೆಯುತ್ತಾರೆ. ಬ್ರಿಟಿಷರು ಭಾರತಕ್ಕೆ ಬರುವ ಮುನ್ನ ಇಲ್ಲಿನ ಪ್ರತಿ ಹಳ್ಳಿಯಲ್ಲೂ ಶಾಲೆಗಳಿದ್ದವು, ಮತ್ತು ಅದರಲ್ಲಿ ಜಾತಿ ಆಧಾರಿತವಲ್ಲದ, ಎಲ್ಲಾ ಜಾತಿಯ ಮಕ್ಕಳಿಗೂ, ಹೆಣ್ಣುಮಕ್ಕಳಿಗೂ ಉಚಿತ ಅಥವಾ ಅತಿ ಕಡಿಮೆ ವೆಚ್ಚದ ಶಿಕ್ಷಣ ದೊರೆಯುತ್ತಿತ್ತು. ಆದರೆ ಆ ಕಾಲದ ಇಂಗ್ಲೆಂಡ್‌ನಲ್ಲಿ ಕೇವಲ ಮೇಲ್ವರ್ಗದವರಿಗೆ ಮಾತ್ರ ಶಿಕ್ಷಣದ ಅವಕಾಶವಿತ್ತು. ಬಳ್ಳಾರಿಯ ಬ್ರಿಟಿಷ್ ಕಲೆಕ್ಟರ್‌ ಆಗಿದ್ದ ಎ.ಡಿ. ಕ್ಯಾಂಪ್‌ಬೆಲ್‌ನ ೧೮೨೩ಯ ವರದಿ ಪ್ರಕಾರ ಇಲ್ಲಿನ ಸನಾತನ ಶಿಕ್ಷಣ ಪದ್ಧತಿಯನ್ನೇ ಬ್ರಿಟಿಷರು ಇಂಗ್ಲೆಂಡ್‌ನಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡರೇ ವಿನಹ ಅಲ್ಲಿಂದ ಬಂದ ಬಿಳಿಯರು ಇಲ್ಲಿ ಹೊಸದಾಗಿ ಶಿಕ್ಷಣ ಕ್ರಾಂತಿ ಮಾಡಲಿಲ್ಲ. ಇಲ್ಲಿನ ಹಿಂದೂ ರಾಜರು ಕೊಡುತ್ತಿದ್ದ ಅನುದಾನದಿಂದ ನಡೆಯುತ್ತಿದ್ದ ಶಾಲೆಗಳು ಬ್ರಿಟಿಷರ ಆಗಮನದ ನಂತರ ನಿಂತುಹೋದವು ಎಂದು ಆತ ಬರೆಯುತ್ತಾನೆ.

ಸ್ಟಾಕ್‌ಹೋಮ್‌ ಸಿಂಡ್ರೋಮ್‌ ಬಗ್ಗೆ ಹೆಚ್ಚಿನವರು ಕೇಳಿರಬಹುದು. ಶೋಷಿತರೇ ತಮ್ಮನ್ನು ಬಂಧಿಸಿಟ್ಟ, ಹಿಂಸಿಸಿದ ಕ್ರೂರಿಗಳನ್ನು ಆರಾಧಿಸುವ, ಅವರ ಪರವಾಗಿ ನಿಲ್ಲುವ ವಿಚಿತ್ರ ಮನೋರೋಗ ಇದು. ನಮ್ಮಲ್ಲಿನ್ನೂ ಉಳಿದಿರುವ ಇಂಗ್ಲೀಷರ ಜೀವನಶೈಲಿಯ ಕುರುಡು ಆರಾಧನೆ ಅದಕ್ಕೆ ಸಾಕ್ಷಿ. ಇದರ ಮೊದಲ ಬಲಿ ನಮ್ಮ ಮಕ್ಕಳಿಗೆ ಕಲಿಸುತ್ತಿರುವ ಇತಿಹಾಸ. ನಾವು ಹೇಳಿಕೊಡುತ್ತಿರುವ ಇತಿಹಾಸ ನಮ್ಮವರೇ ಸ್ವತಂತ್ರವಾಗಿ ಬರೆದಿಟ್ಟದ್ದಲ್ಲ, ಬದಲಾಗಿ ಇಲ್ಲಿಗೆ ಹೊರಗಿನಿಂದ ಬಂದವರು ಬರೆದಿಟ್ಟ ಕಥೆಗಳು. ಅವುಗಳ ಸತ್ಯತೆಯ ಪೂರ್ಣ ಪರಿಶೀಲನೆ ಅಂತೂ ಈಗ ಸಾಧ್ಯವಿಲ್ಲ. ನಮ್ಮ ವಿಸೃತ ’ಇತಿಹಾಸ’ ಶುರುವಾಗುವುದೇ ಯೂರೋಪಿಯನ್ನರ ಆಗಮನದಿಂದ. ಹಾಗಾದರೆ ಅದಕ್ಕೂ ಮೊದಲೇ ಏಷ್ಯಾದ ವಿವಿಧ ಭಾಗಗಳನ್ನು ಆಳುತ್ತಿದ್ದ ಭಾರತೀಯ ರಾಜರ ಕಥೆ ಹೇಳುವವರ್ಯಾರು? ಇತಿಹಾಸ ಬರೀ ರಾಜರ ಕಥೆಯೂ ಅಲ್ಲ. ನಮ್ಮ ಹಿಂದಿನ ಜೀವನಶೈಲಿ, ಅಲಂಕಾರ, ಸಂಪ್ರದಾಯ, ಗಣಿತ, ಖಗೋಳ ವಿಜ್ಞಾನ, ನೌಕಾ ಸಾಧನೆಗಳು, ಯೋಗ, ಆಯುರ್ವೇದ ಎಲ್ಲವೂ. 

ವಾಸ್ಕೋ ಡ ಗಾಮನ ನೌಕಾ ಪರ್ಯಟನೆಯ ಸಾಹಸದ ಬಗ್ಗೆ ಓದಿ ಓದಿ ಅಚ್ಚರಿಪಡುವ ನಾವು ಚೋಳರ ಮಲೇಷಿಯಾ, ಇಂಡೋನೇಷಿಯಾವರೆಗಿನ ನೌಕಾ ವಿಜಯಗಳ ಬಗ್ಗೆ, ಅವರಿಗೆ ಥೈಲಾಂಡ್‌ ಮತ್ತು ಕಾಂಬೋಡಿಯಾ ದೇಶಗಳ ರಾಜರು ಕೊಡುತ್ತಿದ್ದ ಕಪ್ಪಕಾಣಿಕೆಯ ಬಗ್ಗೆ ಎಲ್ಲಿ ಓದಿದ್ದೇವೆ? ನಮ್ಮ ಜನರ ಮತ್ತು ಅವರನ್ನು ಆಳಿದವರ ವಿದ್ವತ್ತಿನ ಬಗ್ಗೆ, ಅವರು ಕೈಗೊಂಡ ಸಾಮಾಜಿಕ ಸುಧಾರಣೆಗಳ ಬಗ್ಗೆ ಎಲ್ಲಿ ಕೇಳಿದ್ದೇವೆ? ಬೆಂಗಳೂರಿನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸಯನ್ಸ್‌ ಕಟ್ಟಲು ಸಾಧ್ಯವಾದದ್ದು ಮೈಸೂರಿನ ಮಹಾರಾಣಿ ವಾಣಿವಿಲಾಸ ಸನ್ನಿಧಾನರವರ ಅನುದಾನದಿಂದ. ಚಿತ್ರದುರ್ಗದ ಮಾರಿಕಣಿವೆ ಅಣೆಕಟ್ಟು, ಮಹಾರಾಣಿ ಕಾಲೇಜು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಹೀಗೆ ಅವರ ನೂರಾರು ಕೆಲಸಗಳ ಬಗ್ಗೆ ಮಕ್ಕಳಿಗೆ ಹೇಳುವವರ್ಯಾರು? ಬಲಿಷ್ಠ ಪೋರ್ಚುಗೀಸರನ್ನು ಸೋಲಿಸಿ ಪರ್ಷಿಯಾ, ಯೂರೋಪಿನಲ್ಲೆಲ್ಲ ತನ್ನ ಶೌರ್ಯಕ್ಕೆ ಪ್ರಸಿದ್ಧಿಯಾದ ಉಳ್ಳಾಲದ ರಾಣಿ ಅಬ್ಬಕ್ಕಳಂತವರ ಕಥೆ ನಮ್ಮ ಪಠ್ಯಗಳಲ್ಲಿ ಯಾವಾಗ ಓದಬಹುದು?

ಈಗ ನಮ್ಮ ಪಠ್ಯಪುಸ್ತಕಗಳಲ್ಲಿ ಇರುವುದು ಕೇವಲ ಭಾರತದ ಮೇಲೆ ಅತಿಕ್ರಮಣ ಮಾಡಿದವರ ಕೃತ್ಯಗಳನ್ನು ಮರೆಮಾಚುವ ಯತ್ನ. ಬ್ರಿಟಿಷರ ಶಿಕ್ಷಣ ಪದ್ಧತಿಯ ಪ್ರತಿಫಲವಾಗಿ ಭಾರತೀಯರು ಆಧುನಿಕತೆ, ಜಾತ್ಯಾತೀತತೆ, ತರ್ಕಬದ್ಧ ವೈಚಾರಿಕತೆ ಬೆಳೆಸಿಕೊಳ್ಳಲು ಸಾಧ್ಯವಾಯಿತು ಅನ್ನುತ್ತದೆ ಹತ್ತನೆ ತರಗತಿಯ ಸಮಾಜ ವಿಜ್ಞಾನ ಪುಸ್ತಕ. ಲಾರ್ಡ್ ಡಾಲ್‌ಹೌಸಿ ಬಂದು ಕಲ್ಕತ್ತಾ, ಬಾಂಬೆ ಮತ್ತು ಮೆಡ್ರಾಸ್‌ನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದ ಮೇಲೆ ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಬಂತು ಎನ್ನುತ್ತದೆ ಆ ಪಾಠ. ಹಾಗಾದರೆ ಆಂಗ್ಲರ ಆಗಮನದ ಮುಂಚೆ ಪ್ರತಿ ಹಳ್ಳಿಯಲ್ಲೂ ಇದ್ದ ಶಾಲೆಗಳು ಸಾರ್ವತ್ರಿಕ ಶಿಕ್ಷಣದ ಉದಾಹರಣೆಗಳಲ್ಲವೇ? ಒಡಿಶಾದ ಪುಷ್ಪಗಿರಿ, ಈಗ ಪಾಕಿಸ್ತಾನದಲ್ಲಿರುವ ತಕ್ಷಶಿಲಾ, ಬಿಹಾರದ ನಾಲಂದಾ ಮತ್ತು ವಿಕ್ರಮಶಿಲಾ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠಗಳಂತಹ ಹತ್ತಾರು ವಿಶ್ವವಿದ್ಯಾಲಯಗಳ ವಿನಾಶದ ಮುಂಚಿನ ವೈಭವದ ಬಗ್ಗೆ ನಮ್ಮ ಮಕ್ಕಳಿಗೆ ಯಾಕೆ ಹೇಳಿಕೊಡಲಾಗುತ್ತಿಲ್ಲ? ಈಗ ಹೇಳಿಕೊಡುತ್ತಿರುವುದು, ಬ್ರಿಟಿಷರು ಬಂದು ನಮ್ಮ ದೇಶದಲ್ಲಿ ಕೈಗಾರಿಕಾ, ಶೈಕ್ಷಣಿಕ, ವ್ಯಾವಹಾರಿಕ, ನ್ಯಾಯಾಂಗ ಕ್ರಾಂತಿಗಳನ್ನು ತಂದರು, ಮಲಿಕ್ ಕಾಫರ್ ’ಯಶಸ್ವಿಯಾಗಿ ದಕ್ಷಿಣ ಭಾರತದ ಮೇಲೆ ದಂಡೆತ್ತಿದ ಗೌರವ ಪಡೆದುಕೊಂಡ,’ ಅಲ್ಲಾವುದ್ದಿನ್ ಖಿಲ್ಜಿ, ತುಘಲಕ್ ಮತ್ತಿತರ ದಾಳಿಕೋರ ರಾಜರ ವಿದ್ವತ್ತು, ಅವರು ಕಲಿತುಕೊಂಡ ಭಾಷೆಗಳು, ಅವರ ವಿದ್ವತ್ತಿನಿಂದಾಗಿ ಅವರು ಬರೆದ (ಬರೆಯಿಸಿದ?) ಮಹಾನ್‍ ಗ್ರಂಥಗಳು, ಅವರ ರಾಜಕೀಯ ಪರಿಣತಿ ಮತ್ತು ಜ್ಞಾನ, ಆಡಳಿತಾತ್ಮಕ ಮತ್ತು ಸಾಮಾಜಿಕ ಸುಧಾರಣೆಗಳು, ಅವರು ಕಟ್ಟಿದ ’ಅದ್ಭುತ ವಾಸ್ತುಶಿಲ್ಪದ ಕಟ್ಟಡಗಳು,’ ಧರ್ಮಸಹಿಷ್ಣುತೆ ಇತ್ಯಾದಿ ಇತ್ಯಾದಿ. ಅವರಲ್ಲಿ ಹೇರಳವಾಗಿದ್ದ ದಾಸ್ಯ ಪದ್ಧತಿ, ಅವರು ನಡೆಸಿದ ಲಕ್ಷಾಂತರ ಭಾರತೀಯರ ಕ್ರೂರ ಮಾರಣಹೋಮ, ನಮ್ಮ ಇಡೀ ಜೀವನಪದ್ಧತಿಯ ಮತ್ತು ನಮ್ಮ ಸಂಸ್ಕೃತಿಯ ನಾಶಗಳ ಬಗ್ಗೆ ನಮ್ಮ ಪಠ್ಯಗಳಲ್ಲಿ ಓದಲು ಸಾಧ್ಯವೇ ಇಲ್ಲವೇನೋ.

ಅಮೇರಿಕಾದಲ್ಲಿರುವ ಭಾರತೀಯರು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವುದರಲ್ಲಿ ನಮಗಿಂತ ಒಂದು ಕೈ ಮೇಲು. ಕ್ಯಾಲಿಫೋರ್ನಿಯಾದ ಪಠ್ಯಪುಸ್ತಕಗಳಲ್ಲಿ ಭಾರತದ ಬಗ್ಗೆ, ಹಿಂದೂಗಳ ಬಗ್ಗೆ ಇದ್ದ ದೋಷಪೂರಿತ ಪಾಠಗಳನ್ನು ಓದಿದ ಅಲ್ಲಿನ ಮಕ್ಕಳು ತಮ್ಮ ಭಾರತೀಯ ಸಹಪಾಠಿಗಳನ್ನು ಛೇಡಿಸುತ್ತಿದ್ದರು. ಅದರಲ್ಲಿ ಹಿಂದೂ ಎಂದರೆ ಬರಿ ಜಾತಿ ಪದ್ಧತಿ, ಹಸುಗಳ ಪೂಜೆ, ವರದಕ್ಷಿಣೆ ಮತ್ತು ಮಹಿಳೆಯರ ದಯನೀಯ ಸ್ಥಿತಿ, ಜೊತೆಗೆ ಸತಿ ಪದ್ಧತಿ, ಅಸ್ಪೃಶ್ಯತೆಗಳಂತಹ ಕಂದಾಚಾರಗಳಿಂದ ತುಂಬಿತುಳುಕುವ ಒಂದು ಕೆಟ್ಟ ಧರ್ಮ ಎಂದು ಬಿಂಬಿಸಲಾಗಿತ್ತು. ಜಗತ್ತಿನ ಅತಿ ಪ್ರಾಚೀನವಾದ ಜೀವಂತ ನಾಗರಿಕತೆಯ, ಸಾವಿರಾರು ವರ್ಷಗಳ ಅಗಾಧ ತತ್ವಜ್ಞಾನದ, ಜೀವನದೃಷ್ಟಿಯ ಕಿರು ಪರಿಚಯವೂ ಕೊಡದ ಆ ಪಾಠಗಳನ್ನು ಓದಿದ ಮಕ್ಕಳು ಮನೆಗೆ ಬಂದು ತಮಗೆ ಇನ್ನು ಮೇಲೆ ಹಿಂದೂ ಆಗಿರಲು ಇಷ್ಟ ಇಲ್ಲ ಎನ್ನಲು ಆರಂಭಿಸಿದರು. ಇದರ ಬದಲಾವಣೆಯನ್ನು ಹೋರಾಟ ರೂಪದಲ್ಲಿ ಕೈಗೆತ್ತಿಕೊಂಡ ಅಲ್ಲಿನ ಹಿಂದೂ ಸಂಘಟನೆಗಳು ಹತ್ತಾರು ವರ್ಷಗಳು ಒದ್ದಾಡಿ ಆ ಪಾಠಗಳಲ್ಲಿ ತಿದ್ದುಪಡಿ ತರುವುದರಲ್ಲಿ ಬಹುಪಾಲು ಯಶಸ್ವಿಯೂ ಆದರು.

ನಮ್ಮ ಮಕ್ಕಳಿಗೆ ನಮ್ಮ ಐತಿಹಾಸಿಕ ವೀರರ ಬಗ್ಗೆಯಾಗಲೀ, ವಿಜ್ಞಾನ, ಗಣಿತ, ಕಲೆ, ವಾಸ್ತುಶಿಲ್ಪ, ಖಗೋಳದಂತಹ ವಿಷಯಗಳಲ್ಲಿ ನಮ್ಮ ಸಾಧನೆಗಳಾಗಲೀ, ತತ್ವ ಮತ್ತು ತರ್ಕ, ವೇದಗಳಾಗಲೀ ಯಾವುದನ್ನೂ ನಾವು ಭಾರತೀಯರು ಅಸಾಮಾನ್ಯರು ಅನ್ನುವ ತರ ಅತಿಶಯವಾಗಿ ಹೇಳಿಕೊಡಬೇಕೆಂದಿಲ್ಲ. ನಾವು ಕಲಿಸಬೇಕಾದದ್ದು ಐತಿಹಾಸಿಕ ಸತ್ಯಗಳನ್ನು; ಒಳ್ಳೆಯ ಮಾತ್ರವಲ್ಲ ಕೆಟ್ಟ ಸತ್ಯಗಳನ್ನೂ. ನಾವು ಮಾಡಿದ ನೂರಾರು ವರ್ಷಗಳ ಸಾಧನೆಗಳು ಮಾತ್ರವಲ್ಲ, ನಮ್ಮ ಕೆಲ ತಪ್ಪುಗಳನ್ನೂ. ಅವುಗಳ ಬಗೆಗಿನ ಅಂತಿಮ ಅಭಿಪ್ರಾಯಕ್ಕೆ ಅವರೇ ಬರುತ್ತಾರೆ. 

ಐತಿಹಾಸಿಕ ಸತ್ಯಕ್ಕೆ ಇರುವುದು ಒಂದೇ ಮುಖ. ಆದರೆ ಅದನ್ನು ಪೊಲಿಟಿಕಲ್‌ ಕರೆಕ್ಟ್‌ನೆಸ್‌ನಿಂದ ಮರೆಮಾಚುತ್ತಾ ಹೋದಂತೆ ನಿಜವಾದ ಇತಿಹಾಸದ ರೂಪ ಬದಲಾಗಿ ಹೋಗುತ್ತದೆ. ಈಗ ಕೇಂದ್ರ ಸರ್ಕಾರ ಪಠ್ಯಪುಸ್ತಕಗಳಲ್ಲಿ ಕೆಲವು ಬದಲಾವಣೆ ಮಾಡಲು ಹೊರಟಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ಪ್ರಕಾರ ಪಂಡಿತ ಮದನಮೋಹನ ಮಾಳವೀಯರ ಆಶಯದಂತೆ ಪ್ರಾಚೀನ ಭಾರತೀಯ ಜ್ಞಾನ ಮತ್ತು ಆಧುನಿಕ ವಿಜ್ಞಾನ ಎರಡನ್ನೂ ಸೇರಿಸಿ ಹೊಸ ಪಠ್ಯಪುಸ್ತಕಗಳನ್ನು ಬರೆಯಲಾಗುತ್ತದೆ. ಅದೂ ಕಳೆದ ಸರ್ಕಾರಗಳ ತರ ಸತ್ಯಕ್ಕೆ ತೇಪೆ ಹಾಕಿ ಅರೆಬರೆ ಕಾಣುವಂತೆ ಮಾತ್ರ ಇರುತ್ತದೆಯೊ ಎಂದು ಕಾದು ನೋಡಬೇಕಷ್ಟೆ. ಇನ್ನು ಪ್ರತಿ ರಾಜ್ಯದ ಪಠ್ಯಪುಸ್ತಕಗಳ ಬದಲಾವಣೆಯ ಆಟಗಳು ಅಲ್ಲಿನ ಸರ್ಕಾರಗಳು ಬದಲಾದ ಹಾಗೆ ನಡೆಯುತ್ತಿರುತ್ತವೆ. ಮಕ್ಕಳು ಶಾಲೆಗಳಲ್ಲಿ ಓದುವ ಇತಿಹಾಸ ಸರ್ಕಾರಗಳ ಮರ್ಜಿಗೆ ತಕ್ಕಂತೆ ಇರುವುದಾದರೆ, ನಿಜವಾದ ಶಿಕ್ಷಣ ಮನೆಗಳಲ್ಲೇ ದೊರೆಯಬೇಕು. ನಮ್ಮ ಮಕ್ಕಳಿಗೆ ನಾವೀಗ ಕಲಿಸಬೇಕಾದದ್ದು ಪಠ್ಯಗಳಲ್ಲಿ ಇರುವುದರ ಪರ್ಯಾಯ ಇತಿಹಾಸ. ಅವರು ತಮ್ಮ ಪರಂಪರೆಯ ಬಗ್ಗೆ ಅಭಿಮಾನ ಪಡುವ ಇತಿಹಾಸ. ನಮ್ಮ ರಸ್ತೆಗಳಿಗೆ, ಊರುಗಳಿಗೆ ಆಕ್ರಮಣಕಾರರ ಹೆಸರು ಇಟ್ಟಿದ್ದೇವೆ, ಅವರು ಕಟ್ಟಿದ ಕಟ್ಟಡಗಳನ್ನು ನೂರಾರು ವರ್ಷಗಳ ನಂತರವೂ ಮುಚ್ಚಟೆಯಿಂದ ಕಾಪಾಡಿಕೊಂಡಿದ್ದೇವೆ. ಇರಲಿ. ಆದರೆ ನಮ್ಮ ಮುಂದಿನ ಪೀಳಿಗೆಗೆ ಇನ್ನಾದರೂ ನಾವು ಆ ಕ್ರೂರ ಸತ್ಯಗಳ ಪರಿಚಯ ಮಾಡಿಕೊಡದಿದ್ದರೆ ಅವರ ಜೀವನವೂ ಕೂಡ ನಮ್ಮ ಹಾಗೆ ಅಸ್ಮಿತೆಯಿಲ್ಲದ, ಅನುಕರಣೆಯ ಅಸ್ತಿತ್ವವಾಗಿ ಉಳಿಯುತ್ತದಷ್ಟೆ.


(Published in Udayavani dated 04/08/2020)

0 comments: